- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂತೋಷ ಲಾಡ್ ವಾಗ್ದಾಳಿ..!
- ಬಿಜೆಪಿಯವರು ಏನು ಮಾಡಿದ್ಧಾರೆ ..? ಅವರ ಕೊಡುಗೆ ಏನಿದೆ..?
- ಬಿಜೆಪಿಯವರಿಗೆ ರಾಹುಲ್ ಗಾಂಧಿಯನ್ನು ವಿರೋಧಿಸುವುದೊಂದೆ ಗೊತ್ತು..!
- ಮೂಲಭೂತ ಪ್ರಶ್ನೆಗಳಿಗೆ ಬಿಜೆಪಿ ಬಳಿ ಉತ್ತರವೇ ಇಲ್ಲ..!
ಹುಬ್ಬಳ್ಳಿ : ಮೂಲಭೂತ ಪ್ರಶ್ನೆಗಳಿಗೆ ಬಿಜೆಪಿ ಬಳಿ ಉತ್ತರವೇ ಇಲ್ಲ. ಬಿಜೆಪಿಯವರು ಕೇವಲ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಾರೆ. ಹತ್ತು ವರ್ಷಗಳಿಂದ ದೇಶದ ಮೂಲಭೂತ ಸಮಸ್ಯೆಗಳ ಬಗ್ಗೆ ಬಿಜೆಪಿಯವರ ಬಳಿ ಉತ್ತರವೇ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರ 10 ವರ್ಷದ ಸಾಧನೆ ಕೇಳಿದರೆ 70 ವರ್ಷದ ಕಥೆಗೆ ಹೋಗುತ್ತಾರೆ. ತಾವು ಹಿಂದೂ ಪರ ಎನ್ನುತ್ತಾರೆ. ಆದರೆ, ದೇಶದ ಹಿಂದೂಗಳೆಲ್ಲ ಬಡತನದಲ್ಲೇ ಇದ್ದಾರೆ. ಯಾವ ಹಿಂದೂಗೂ ಮೋದಿ ಅವರು ಕುದುರೆ ಕೊಟ್ಟಿಲ್ಲ. ಮೋದಿ ಕೊಟ್ಟ ಕುದರೆಯನ್ನು ಯಾವ ಹಿಂದೂ ಕೂಡ ಓಡಿಸುತ್ತಿಲ್ಲ. ಯಾವ ಹಿಂದೂ ಕೂಡ ತನ್ನ ಮನೆಯಲ್ಲಿ ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಿಲ್ಲ. ಬಿಜೆಪಿ ಬಂದ ಮೇಲೆ ಹಿಂದೂಗಳು ಮಧ್ಯಮ ವರ್ಗದಿಂದ ಬಡತನಕ್ಕೆ ಹೋಗಿದ್ದಾರೆ.
ಹಿಂದೂ ಕಾರ್ಡ್ ಜನರ ತಲೆಗೆ ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಂದೂ ಕಾರ್ಡ್ ಮೂಲಕ ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಎಷ್ಟು ಹಿಂದೂ ಮಕ್ಕಳಿಗೆ ಇವರು ಕೆಲಸ ಕೊಟ್ಟಿದ್ದಾರೆ ಹೇಳಲಿ. ಎಷ್ಟು ಹಿಂದೂಗಳಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ..? ದಿನ ಬೆಳಗಾದರೆ ಹಿಂದೂ ಎಂಬ ಆಟ ಆಡುತ್ತಿದ್ದಾರೆ. ಹಿಂದೂ ಮತ್ತು ದೇವರೆಂಬ ಕಾರ್ಡ್ ಹಿಡಿದು ಆಟ ಆಡುತ್ತಿದ್ದಾರೆ. ದೇಶದ ವ್ಯವಸ್ಥೆಗೆ ಯಾರೋ ಒಬ್ಬರು ಅನಿವಾರ್ಯ ಅಲ್ಲ. ಇವರೇ ದೊಡ್ಡವರು ಇವರಿಂದಲೇ ದೇಶ ನಡೆಯುತ್ತಿದೆ ಎನ್ನುವಂತೆ ಮಾಡುತ್ತಿದ್ದಾರೆ. ಇವರೇ ಜೇಮ್ಸ್ ಬಾಂಡ್ ಇವರೇ ಬಂದು ಎಲ್ಲ ಕಾಪಾಡುತ್ತಿದ್ದಾರೆ ಎನ್ನುವಂತೆ ಮಾಡುತ್ತಿದ್ದಾರೆ ಎಂದರು.
ಜತೆಗೆ ಟೆಲಿಪ್ರಾಂಪ್ಟರ್ ಇಲ್ಲದೇ ಮೋದಿಗೆ ಭಾಷಣ ಮಾಡಲು ಬರುವುದಿಲ್ಲ. ಮೋದಿ ಒಮ್ಮೆಯಾದರೂ ಸುದ್ದಿಗೋಷ್ಠಿ ಮಾಡಲಿ. ಮಾಧ್ಯಮದವರು ಕೂಡ ಮೋದಿ ಸುದ್ದಿಗೋಷ್ಠಿ ನಡೆಸುವಂತೆ ಆಗ್ರಹ ಮಾಡಬೇಕು. ಮನಮೋಹನ್ ಸಿಂಗ್ 120ಕ್ಕೂ ಹೆಚ್ಚು ಸುದ್ದಿಗೋಷ್ಠಿ ನಡೆಸಿದ್ದರು.