Top Newsರಾಜಕೀಯರಾಜ್ಯಸುದ್ದಿ

ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ ಮುಗಿದ ಅಧ್ಯಾಯ : ಪೊಲೀಸರ ವಿರುದ್ಧ ಫುಲ್‌ ಗರಂ ಆದ- ಬಸವರಾಜ ಹೊರಟ್ಟಿ

ಬೆಂಗಳೂರು: ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಪೊಲೀಸರ ವಿರುದ್ಧ ಫುಲ್‌ ಗರಂ ಆಗಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ ಮುಗಿದ ಅಧ್ಯಾಯ. ಡಿ.19ರಂದೇ ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಅನಿರ್ದಿಷ್ಟಾವಧಿ ವರೆಗೆ ಮುಂದೂಡಿಕೆ ಆಗಿದೆ. ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಮಹಜರು ಮಾಡ್ತೀನಿ ಅಂತಾ ಪೊಲೀಸರು ಕೇಳಿದ್ರು, ಅದಕ್ಕೆ ನಾವು ಅನುಮತಿ ಕೊಟ್ಟಿಲ್ಲ, ಬಾಗಿಲು ಹಾಕಿದ್ದೇವೆ. ಸದನದಲ್ಲಿ ಮಹಜರು ಮಾಡಲು ಬರಲ್ಲ ಅಂತಾ ಪೊಲೀಸರಿಗೆ ತಿಳಿಸಿದ್ದೇನೆ. ಅವರು ಹೊರಗಿನ ವಿಚಾರಕ್ಕೆ ದೂರು ಕೊಟ್ಟಿದ್ರೆ, ಅದರ ಬಗ್ಗೆ ನಾವು ಹಸ್ತಕ್ಷೇಪ ಮಾಡಲ್ಲ. ಆದ್ರೆ ಆ ದಿನ ರಾತ್ರಿ 1 ಗಂಟೆ ತನಕವೂ ಸಿ.ಟಿ ರವಿ ಜೊತೆ ಸಂಪರ್ಕದಲ್ಲಿ ಇದ್ದೆ. ಪೊಲೀಸ್ ಆಯುಕ್ತರ ಜೊತೆಗೆ ಮಾತನಾಡಿ ಎಚ್ಚರಿಕೆ ಕೊಟ್ಟಿದ್ದೆ. ಏನಾದರೂ ಆದ್ರೆ ಸುಮ್ಮನೆ ಬಿಡಲ್ಲ ಅಂತ ಹೇಳಿದ್ದೆ. ಬೆಳಗ್ಗೆ ತನಕವೂ ನಾನು ಟ್ರ‍್ಯಾಕ್ ಮಾಡಿದ್ದೆ, ಬೆಳಗ್ಗೆ 5 ಗಂಟೆಗೆ ಎಸ್ಪಿಗೂ ಕೂಡ ಮಾತಾಡಿದ್ದೆ. ಅಲ್ಲದೇ ಈಗಾಗಲೇ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದ್ದಾರೆ.

ಸಿಟಿ ವಿ ಮೇಲೆ ಹಲ್ಲೆ ಯತ್ನ: 10 ಮಂದಿ ವಿರುದ್ಧ ಎಫ್​ಐಆರ್

ಸುವರ್ಣ ವಿಧಾನ ಸೌಧದಲ್ಲಿ ಎಂಎಲ್​ಸಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ 10 ಜನ ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಸೆಕ್ರೆಟರಿ ಕಚೇರಿಯಿಂದ ಕಮಿಷನರ್ ಕಚೇರಿಗೆ ದೂರಿನ ಪತ್ರ ಸಲ್ಲಿಕೆಯಾಗಿತ್ತು. ಎಂಎಲ್​ಸಿ ಡಿಎಸ್.ಅರುಣ್, ಎಸ್​ವಿ ಸಂಕನೂರ, ಕಿಶೋರ್ ಬಿಆರ್ ಬೆಂಗಳೂರಿನ ಸೆಕ್ರೆಟರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿತ್ತು. ಅದರಂತೆ, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಇನ್ನೂ ಸಿ.ಟಿ ರವಿ ಪ್ರಾಸ್ಟಿ** ಹೇಳಿಕೆ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿರುವ ಕುರಿತು ಮಾತನಾಡಿ, ನಮ್ಮಲ್ಲಿ ವಿಡಿಯೋ ರೆಕಾರ್ಡ್ ಆಗಿಲ್ಲ. ಅದೆಲ್ಲ ಫೇಕ್ ವಿಡಿಯೋ ಇರಬೇಕು, ಇದ್ದರೆ ದೂರು ಕೊಡಲಿ ಎಫ್‌ಎಸ್‌ಎಲ್‌ಗೆ ಕೊಡ್ತೀವಿ, ಆ ಬಳಿಕ ಏನ್ ಮಾಡಬೇಕು ತೀರ್ಮಾನ ಮಾಡ್ತೀನಿ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button