ಮಹಾರಾಷ್ಚ್ರ ವಿಧಾನಸಭೆ ಚುನಾವಣೆ ನಡುವೆಯೇ ತಮ್ಮ ವಿರುದ್ಧ ಕೇಳಿಬಂದಿರುವ Crypto funds ಡೀಲ್ ಆರೋಪವನ್ನು ಎನ್ ಸಿಪಿ ಶರದ್ ಪವಾರ್ ಬಣದ ನಾಯಕಿ ಸುಪ್ರಿಯಾಸುಳೆ ತಳ್ಳಿಹಾಕಿದ್ದು, ಈ ಕುರಿತು BJP ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮಾಜಿ ಪೊಲೀಸ್ ಕಮಿಷನರ್ ಮತ್ತು ಡೀಲರ್ನೊಂದಿಗೆ ಅಕ್ರಮ ವಹಿವಾಟು ನಡೆಸಲು ಪಿತೂರಿ ನಡೆಸಿದ್ದಾರೆ. ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (MVA) ಪರವಾಗಿ ಚುನಾವಣಾ ಫಲಿತಾಂಶವನ್ನು ತಿರುಗಿಸಲು ಸಂಚು ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಆರೋಪಿಸಿದ್ದರು.ಈ ಆರೋಪದ ವಿಚಾರ ಇದೀಗ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಇದಕ್ಕೆ ಇಂಬು ನೀಡುವಂತೆ ಆಡಿಯೋ ಕ್ಲಿಪ್ ಅನ್ನೂ ಕೂಡ ಬಿಜೆಪಿ ಬಿಡುಗಡೆ ಮಾಡಿದೆ.
ಈ ವಿಚಾರ ವೈರಲ್ ಆಗುತ್ತಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಪ್ರಿಯಾ ಸುಳೆ, ‘ಇದೊಂದು ರಾಜಕೀಯ ಪಿತೂರಿ. ನಕಲಿ ಧ್ವನಿಯನ್ನು ಸೃಷ್ಟಿಸಲಾಗಿದೆ, ಅಪರಾಧಿ ಯಾರೆಂದು ಪೊಲೀಸರು ಪತ್ತೆ ಮಾಡುತ್ತಾರೆ. ಇದು ನನ್ನ ಧ್ವನಿಯೂ ಅಲ್ಲ ಅಥವಾ ನಾನಾ ಪಟೋಲೆ ಅವರ ಧ್ವನಿಯೂ ಅಲ್ಲ.ನಾನು ಬಿಟ್ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ವಿರುದ್ಧ ಮಾತನಾಡಿದ್ದೇನೆ.
ನಾನು ಅದರ ಬಗ್ಗೆ ತುಂಬಾ ಗಂಭೀರವಾದ ವಿಷಯಗಳನ್ನು ಎತ್ತಿರುವ ವ್ಯಕ್ತಿ. ಬಿಜೆಪಿಯವರಿಗೆ ಉತ್ತರಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಸಂಪೂರ್ಣ ಪಾರದರ್ಶಕತೆಯ ವ್ಯಕ್ತಿಯಾಗಿರುವುದರಿಂದ ಬಿಜೆಪಿಯ ಯಾವುದೇ ಪ್ರಶ್ನೆಗೆ ಉತ್ತರಿಸಲು ನನಗೆ ತುಂಬಾ ಸಂತೋಷ ಎಂದು ಹೇಳಿದ್ದಾರೆ.
ಅಂತೆಯೇ ಪುರಾವೆಗಳಿಲ್ಲದೆ ಆರೋಪಗಳನ್ನು ಆಧರಿಸಿ ತನ್ನನ್ನು ಬಂಧಿಸದಿರುವ ಮಹಾರಾಷ್ಟ್ರ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. ಚುನಾವಣೆಯ ಹಿಂದಿನ ದಿವಸ ಪ್ರಾಮಾಣಿಕ ಮತದಾರರ ದಿಕ್ಕು ತಪ್ಪಿಸಲು ಸುಳ್ಳು ಮಾಹಿತಿಗಳನ್ನು ಹರಡುವುದು ಎಲ್ಲರಿಗೂ ಚೆನ್ನಾಗಿ ತಿಳಿದಿರುವ ತಂತ್ರ ಎಂದು ತಿರುಗೇಟು ನೀಡಿದ್ದಾರೆ.
ಸುಧಾಂಶು ತ್ರಿವೇದಿ ಅವರ 5 ಪ್ರಶ್ನೆಗಳಿಗೆ ಎಲ್ಲಿ ಬೇಕಾದರೂ ಉತ್ತರಿಸಲು ನಾನು ಸಿದ್ಧನಿದ್ದೇನೆ. ಅವರು ಹೇಳಿದ ಸಮಯ, ಸ್ಥಳ ಮತ್ತು ಅವರು ಹೇಳಿದ ವೇದಿಕೆಯಲ್ಲಿ ನಾನು ಅವರಿಗೆ ಉತ್ತರಿಸಲು ಸಿದ್ಧನಿದ್ದೇನೆ ಏಕೆಂದರೆ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಹೇಳಿದ್ದಾರೆ.
ಛತ್ತೀಸ್ಗಢದಲ್ಲೂ ಜಾರಿ ನಿರ್ದೇಶನಾಲಯ ಮೆಗಾ ರೇಡ್..!
ಮಹಾರಾಷ್ಟ್ರದಲ್ಲಿ ಬಿಟ್ಕಾಯಿನ್ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಮೆಹ್ತಾ ಅವರ ಛತ್ತೀಸ್ಗಢದ ನಿವಾಸ ಹಾಗೂ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ಬುಧವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಇಡಿ ದಾಳಿ ನಡೆಸಿದೆ.
ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿರುವ ಮೆಹ್ತಾ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.