ಚಿತ್ರದುರ್ಗ: ನಗರದಲ್ಲಿ ಖಾಸಗಿ ಗಾರ್ಮೆಂಟ್ಸ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಸಿಪಿಐ ಗುಡ್ಡಪ್ಪ, ವೆಂಕಟೇಶ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳಿಕ ಪೊಲೀಸರು ಪರಿಶೀಲನೆ ಮುಂದುವರಿಸಿದ್ದು, 15 ಜನ ಶಂಕಿತ ಬಾಂಗ್ಲಾ ನುಸುಳುಕೋರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಶಕ್ಕೆ ಪಡೆದವರ ಪೈಕಿ ಹೆಚ್ಚಿನವರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಸದ್ಯ ಕೋಟೆ ಪೊಲೀಸ್ ಠಾಣೆಯಲ್ಲಿ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಬಾಂಗ್ಲಾ ನುಸುಳುಕೋರರ ಪತ್ತೆಗೆ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.