ಬೆಂಗಳೂರು : ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಆ ಪಕ್ಷದ ನಾಯಕರು ಯಾರನ್ನು ಬೇಕಾದರೂ ಅಭ್ಯರ್ಥಿಯನ್ನಾಗಿ ಘೋಷಿಸಬಹುದು ಎಂದುಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗೆ ಈಗಾಗಲೇ ಬಿಜೆಪಿಯ ಎರಡು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಇನ್ನೊಂದು ಕ್ಷೇತ್ರ ಜೆಡಿಎಸ್ನವರಿಗೆ ಬಿಟ್ಟಿದ್ದು, ಯಾರನ್ನು ಬೇಕಾದರೂಘೋಷಣೆ ಮಾಡಿಕೊಳ್ಳಬಹುದು ಎಂದು ಪಕ್ಷದ ರಾಷ್ಟ್ರೀಯ ನಾಯಕ ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಅವರಿಗೆ ಯಾರ ಹೆಸರು ಬೇಕೊ ಅದನ್ನು ಘೋಷಿಸುತ್ತಾರೆ. ಒಟ್ಟಾಗಿ ಮೂರೂ ಕ್ಷೇತ್ರ ಗೆಲ್ಲಲು ಶ್ರಮ ವಹಿಸುತ್ತೇವೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ತೀರ್ಮಾನ ದೆಹಲಿಯವರು ತೆಗೆದುಕೊಳ್ಳುತ್ತಾರೆ. ನಾನು ಚರ್ಚೆ ಮಾಡಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ಮಾಡುತ್ತೇವೆ. ಬಿಜೆಪಿಗರು ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಯ ಯೋಚನೆ ಇಲ್ಲ ಎಂದರು.