ರಾಜಕೀಯಸುದ್ದಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಹೆಚ್‌ಡಿ ದೇವೇಗೌಡ ಫಸ್ಟ್‌ ರಿಯಾಕ್ಷನ್‌!

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದು ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಇಲ್ಲಿಯವರೆಗೂ ಪ್ರಕರಣದ ಬಗ್ಗೆ ಒಂದೇ ಒಂದು ಮಾತನಾಡದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಶನಿವಾರ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ವೇಳೆ ಪ್ರಜ್ವಲ್‌ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಯಾವುದೇ ತಕರಾರಿಲ್ಲ. ನಮ್ಮ ಕುಟುಂಬಕ್ಕೆ ಹಿನ್ನಡೆ ತರುವ ಪ್ರಯತ್ನ ನಡೆಯುತ್ತಿದೆ, ಇದೆಲ್ಲದರ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಾರೆ ಎಂದರು.

ತಮ್ಮ ಜನ್ಮದಿನದ ಪ್ರಯುಕ್ತ ಜೆಪಿ ನಗರದ ತಿರುಮಲಗಿರಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಹೆಚ್‌ಡಿ ರೇವಣ್ಣ ಅವರ ವಿಚಾರ ಕೋರ್ಟ್‌ನಲ್ಲಿ ಇದೆ, ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಪ್ರಜ್ವಲ್‌ ರೇವಣ್ಣ ಮೇಲೆ ಕ್ರಮ ತೆಗೆದುಕೊಳ್ಳಲು ನಮ್ಮ ಯಾವುದೇ ತಕರಾರಿಲ್ಲ. ಆದರೆ, ಹೆಚ್‌ಡಿ ರೇವಣ್ಣ ಅವರ ಮೇಲೆ ಮಾಡಿರೋದು ಸರಿಯಿಲ್ಲ. ಹೆಚ್‌ಡಿ ರೇವಣ್ಣ ಅವರ ಮೇಲೆ ಯಾವ ರೀತಿ ಕೇಸ್‌ಗಳನ್ನು ಸೃಷ್ಟಿಸಿದ್ದಾರೆ ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಹೆಚ್‌ಡಿ ರೇವಣ್ಣ ಅವರಿಗೆ ಒಂದರಲ್ಲಿ ಬೇಲ್‌ ಸಿಕ್ಕಿದೆ, ಮತ್ತೊಂದರ ತೀರ್ಪು ಸೋಮವಾರ ಇದೆ ಎಂದು ಹೇಳಿದರು.

ಪ್ರಜ್ವಲ್‌ ರೇವಣ್ಣ ಹೊರದೇಶಕ್ಕೆ ಹೋಗಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಅವರು ನಮ್ಮ ಇಡೀ ಕುಟುಂಬದ ಪರವಾಗಿ ಕಾನೂನು ವ್ಯಾಪ್ತಿಯಲ್ಲಿ ಏನ್‌ ಕೆಲಸ ಮಾಡ್ಬೇಕೋ ಅದನ್ನು ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಅನೇಕ ಜನರು ಇದ್ದಾರೆ, ಅವರ ಹೆಸರನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಹೋಗಲ್ಲ. ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು. ಸಂತ್ರಸ್ತ್ರರಿಗೆ ಪರಿಹಾರ ಕೊಡಬೇಕು ಸೇರಿ ಅನೇಕ ವಿಷಯಗಳನ್ನು ಕುಮಾರಸ್ವಾಮಿ ಅವರು ನನಗೆ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದರು.

ಹೆಚ್‌ಡಿ ಕುಮಾರಸ್ವಾಮಿ ಅವರು ಖಂಡಾತುಂಡವಾಗಿ ಈ ಪ್ರಕರಣದ ಹಿಂದೆ ಇರುವ ಯಾರನ್ನೂ ಬಿಡಲ್ಲ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಹೆಚ್‌ಡಿ ಕುಮಾರಸ್ವಾಮಿ ಅವರು ಉತ್ತರ ಕೊಡುತ್ತಾರೆ ಎಂದ ಅವರು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರು ಡಿಕೆ ಶಿವಕುಮಾರ್‌ ಮೇಲೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದರು. ಎಲ್ಲದಕ್ಕೂ ಹೆಚ್‌ಡಿ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ದೇವರಾಜೇಗೌಡರ ಹೇಳಿಕೆಯನ್ನು ನಾವು ನೋಡಿದ್ದೇವೆ. ಹೆಚ್‌ಡಿ ಕುಮಾರಸ್ವಾಮಿ ಅವರು ಎಲ್ಲ ವಿಷಯದ ಬಗ್ಗೆ ಮಾತನಾಡ್ತಾರೆ. ಪಕ್ಷದ ಅಧ್ಯಕ್ಷನಾಗಿ ಯಾವುದೇ ವಿಷಯ ಬಂದರೂ ಅವರಿಗೆ ಹೋರಾಟದ ಛಲವಿದೆ. ಅವರು ಎಲ್ಲ ವಿಷಯದ ಬಗ್ಗೆ ಮಾತಾಡ್ತಾರೆ ಎಂದರು.

Comments (0)

Your email address will not be published. Required fields are marked *

Back to top button