ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಬುಧವಾರ ದೆಹಲಿಗೆ ಬರುವಂತೆಯೂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಆಪ್ತರ ಜತೆ ಮಾಹಿತಿ ಹಂಚಿಕೊಂಡಿರುವ ಈಶ್ವರಪ್ಪ ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದ ಕೆ.ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಉಕ್ಕಿನ ಮನುಷ್ಯ ಅಮಿತ್ ಶಾ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಪಕ್ಷದ ಹಿರಿಯರಾಗಿದ್ದೀರಾ ನಿಮ್ಮ ಸ್ಪರ್ಧೆ ನಮಗೆ ಆಶ್ಚರ್ಯ ತಂದಿದೆ ಎಂದರು. ಆಗ ನಾನು ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈನಲ್ಲಿ ಇದೆ ಎಂದು ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಹಿಡಿತದಲ್ಲಿದೆ ಅದನ್ನ ತಡೆಯಬೇಕು ಎಂಬ ಭಾವನೆಯಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಇನ್ನು ನೊಂದ ಕಾರ್ಯಕರ್ತರ ಭಾವನೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದುತ್ವದ ಬಗ್ಗೆ ಹೋರಾಟ ಮಾಡುವ ನಾಯಕರ ಪರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಬಿಜೆಪಿಯಿಂದ ಒಂದೇ ಒಂದು ಸ್ಥಾನ ಸಿಕ್ಕುತಿಲ್ಲ. ರಾಜ್ಯದಲ್ಲಿ ಒಬ್ಬ ಕುರುಬರಿಗೂ ಕೂಡ ಟಿಕೆಟ್ ಸಿಕ್ಕಿಲ್ಲ. ಅಮಿತ್ ಶಾ ಅವರು ಬಂಡಾಯ ವಾಪಸ್ ಪಡೆದುಕೊಳ್ಳಿ ನಿಮ್ಮ ಬೇಡಿಕೆ ಈಡೇರಿಸೋಣ ಎಂದರು. 3 ತಿಂಗಳ ಹಿಂದೆ ತಮ್ಮ ಬಳಿ ನಾನು ಒಂದು ಮಾತನಾಡಿದರು ಏನು ಬದಲಾವಣೆ ಆಗಿಲ್ಲ. ನಾಳೆ ದಿನ ದೆಹಲಿಗೆ ಬರಬೇಕು ಎಂದು ಅಮಿತ್ ಶಾ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ನೀವು ದೊಡ್ಡವರಿದ್ದೀರಿ, ನಿಮ್ಮ ಕರೆಗೆ ನಾನು ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.