
ರಾಯಚೂರು: ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಜಾಮೀಯ ಮಸೀದಿ ಅಭಿವೃದ್ಧಿ ಕಾಮಗಾರಿಗೆ ವಕ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 30 ಲಕ್ಷ ರೂಪಾಯಿ ಅನುದಾನ ನೀಡಿತ್ತು ಈ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಸ್ಥಳೀಯ ವಲಿಯುದ್ದೀನ್ ಲೋಕಾಯುಕ್ತಕ್ಕೆ ದೂರು ನೀಡದ್ದರು.ಇದು ಆರೋಪಿಗಳ ಕೆಂಗಣ್ಣಿಗೆ ಕಾರಣವಾಗಿ ಅರೋಪಿಗಳು ವಲಿಯುದ್ಧೀನ್ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ.
ಅನುದಾನ ರೂ.30 ಲಕ್ಷ ದುರ್ಬಳಕೆ- ಬಯಲಿಗೆಳೆದ ದೂರುದಾರರಿಗೆ ಚಾಕು ಇರಿತ

ವಕ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದೇ ತಪ್ಪಾಯಿತೇ? ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರ ಮೇಲೆ ಹಾಡಹಗಲೇ ಚಾಕು ಮತ್ತು ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ರಾಯಚೂರು ನಗರದ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ.ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಜಾಮೀಯ ಮಸೀದಿ ಅಭಿವೃದ್ಧಿ ಹಾಗೂ ಕಬರಸ್ತಾನ ನಿರ್ಮಾಣಕ್ಕಾಗಿ ಸರ್ಕಾರದಿಂದ ಸುಮಾರು 30 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು.ಅನುದಾನ ಸಮರ್ಪಕವಾಗಿ ಬಳಕೆಯಾಗದ ಕಾರಣ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಗ್ರಾಮದ ವಲಿಯುದ್ದೀನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗಷ್ಟೇ ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದರು.
ಇದರಿಂದ ಕೆರಳಿದ ಅಶು ಪಟೇಲ್, ನಿಜಾಮ್, ಯೂನೂಸ್, ಹೈದರ್ ಬಷೀರ್ ಹಾಗೂ ಜಾವಿದ್ ಸೇರಿದಂತೆ ಸುಮಾರು 20 ಜನರ ತಂಡ ದೂರುದಾರನಿಗೆ ಚಾಕುವಿನಿಂದ ಇರಿದು ಆತನ ಮಕ್ಕಳು ಹಾಗೂ ಸಂಬಂಧಿಕರ ಮೇಳೆ ಸಾಮೂಹಿಕ ಹಲ್ಲೆ ನಡೆಸಿದ್ದಾರೆ.ಹಲ್ಲೆಯಿಂದ ಸನಾ ಉಲ್ಹಕ್, ಜಿಕ್ರಿಯಾ, ಎಂ.ಡಿ.ಕಿಬ್ರಿಯಾ ಮತ್ತು ಶೌಕತ್ ಅಲಿ ಇವರಿಗೆ ಗಂಭೀರ ಗಾಯಗಳಾಗಿವೆ.ಇಷ್ಟೇ ಅಲ್ಲದೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಗೆ ಸೇರ್ಪಡೆ – ಕೇಸ್ ದಾಖಲು
ಗಂಭೀರವಾಗಿ ಗಾಯಗೊಂಡವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ಮುಂದುವರಿದಿದೆ. ನಗರದ ಹೃದಯಭಾಗದಲ್ಲಿ ರಕ್ತಪಾತ ನಡೆದಿದೆ. ಘಟನೆ ಸಂಬಂಧ ರಾಯಚೂರಿನ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ತಹಶೀಲ್ದಾರ್ ಕಚೇರಿಯಂತಹ ಜನನಿಬಿಡ ಪ್ರದೇಶದಲ್ಲೇ ಇಂತಹ ಹೊಡಿಬಡಿ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ರಕ್ಷಣೆ ಇಲ್ಲವೇ ಎಂಬ ಯಕ್ಷಪ್ರಶ್ನೆ ಮೂಡಿದೆ.
#RaichurCrime #WaqfBoardScam #LokayuktaInvestigation #AssaultCase #RaichurNews #CorruptionUnveiled #TalamariVillage #CrimeUpdate #FreedomTV #KarnatakaNews