ಬೆಂಗಳೂರು : ಪವರ್ ಶೇರಿಂಗ್ ಕುರಿತು ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪವರ್ ಶೇರಿಂಗ್ ಬಗ್ಗೆ ಗೊಂದಲವಿದೆ. ಸಚಿವ ಸತೀಶ್ ಜಾರಕಿಹೊಳಿ ಗೊಂದಲ ಬಗೆಹರಿಸಿ ಎಂದಿರುವುದು ಸರಿಯಿದೆ. ಪ್ರತಿನಿತ್ಯ ಮಾಧ್ಯಮಗಳಲ್ಲಿ ಬರುತ್ತಿದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಅದನ್ನ ಬಗೆಹರಿಸಿ ಅಂದಿರೋದು ಸರಿ ಇದೆ. ಇದನ್ನು ಹೈಕಮಾಂಡ್ ಗಮನಿಸುತ್ತದೆ. ಯಾವಾಗ ಔಷಧಿ ಕೊಡಬೇಕು ಕೊಡ್ತಾರೆ. ನಾನೂ ಗೊಂದಲ ಬಗೆಹರಿಸಿ ಅಂತಾನೇ ಹೇಳ್ತೇನೆ ಎಂದು ತಿಳಿಸಿದರು.
ಬಿಹಾರ ಚುನಾವಣೆ ನಂತರ ರಾಜ್ಯದಲ್ಲಿ ಬೆಳವಣಿಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚುನಾವಣೆ ನಂತರ ಬದಲಾವಣೆ ಅಂತ ಏನೂ ಇಲ್ಲ. ಹೈಕಮಾಂಡ್ ಬದಲಾವಣೆ ಮಾಡಬೇಕು ಅಂದ್ರೆ ಮಾಡ್ತಾರೆ. ಯಾವತ್ತು ಬೇಕಾದರೂ ಮಾಡುತ್ತಾರೆ. ಬದಲಾವಣೆ ಚುನಾವಣೆ ನೋಡಿ ಮಾಡುವುದಿಲ್ಲ. ಸಿಎಂ, ಡಿಸಿಎಂ ನಮಗೆಲ್ಲರಿಗೂ ಜವಾಬ್ದಾರಿ ಇದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗ್ತಿದೆ. ಆ ಕಡೆ ನಾವು ಮೊದಲು ಗಮನ ಹರಿಸಬೇಕು. ದಕ್ಷಿಣ ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳಿವೆ. ಬೆಂಗಳೂರಿನಲ್ಲಿ ಸಹ ಸಮಸ್ಯೆಗಳು ಇವೆ. ಇವೆಲ್ಲವನ್ನು ಬಗೆಹರಿಸೋದು ನಮ್ಮ ಆದ್ಯತೆ. ಆದ್ಯತೆ ಮೇಲೆ ನಾವು ಹೋಗಬೇಕು. ಬದಲಾವಣೆ ಅದು ಇದು ಅಂತ ಗಮನವಿಲ್ಲ ಎಂದರು.
ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ವಸ್ತು ಎಸೆದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಇದು ಒಬ್ಬ ಗವಾಯಿಯವರ ಪ್ರಶ್ನೆ ಅಲ್ಲ. ಆ ಸ್ಥಾನಕ್ಕೆ, ಸಂವಿಧಾನಕ್ಕೆ ಮಾಡಿದ ಅಪಮಾನ. ಅಲ್ಲಿಯ ಸೆಕ್ಯೂರಿಟಿ ವಿಫಲವಾಗಿದೆ. ನ್ಯಾಯಾಲಯದಲ್ಲಿ ಇಂತ ಘಟನೆ ನಡೆಯುತ್ತದೆ ಅಂದ್ರೆ, ಅದು ಪರಮೋಚ್ಚ ನ್ಯಾಯಾಲಯದಲ್ಲಿ ಘಟನೆ ಅಂದ್ರೆ ಏನರ್ಥ?. ಆ ವಕೀಲನನ್ನು ಮೊದಲು ಬಂಧಿಸಬೇಕು. ಕಾನೂನು ಪ್ರಕಾರ ಕ್ರಮ ಆಗಬೇಕಿತ್ತು. ಅವನನ್ನು ಯಾಕೆ ಬಿಟ್ಟು ಕಳುಹಿಸಿದ್ರು ಗೊತ್ತಿಲ್ಲ. ಮೊದಲು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವ ಪರಮೇಶ್ವರ್ ಒತ್ತಾಯಿಸಿದರು.
ಅವನು ಆಡಿರುವ ಮಾತು ಸರಿಯಲ್ಲ. ಸನಾತನ ಧರ್ಮದ ಬಗ್ಗೆ ಅವನು ಮಾತಾಡಿದ್ದಾನೆ. ತೀರ್ಪು ಕೊಡುವಾಗ ಒಬ್ಬರ ಪರ ಕೋಡೋಕೆ ಆಗಲ್ಲ. ಕಾನೂನು ಪ್ರಕಾರನೇ ತೀರ್ಪುಗಳನ್ನು ಕೊಡ್ತಾರೆ. ಅಂತದ್ರಲ್ಲಿ ಅದೇ ಕಾರಣ ಮಾಡಿಕೊಂಡು ದಾಳಿ ಮಾಡಲಾಗಿದೆ. ಈ ದಾಳಿ ಮಾಡಿರೋದನ್ನು ನಾನು ಖಂಡಿಸುತ್ತೇನೆ. ಸಿಜೆಐಯವರು ದಲಿತ ಸಮುದಾಯಕ್ಕೆ ಸೇರಿದವರು. ಆ ಸ್ಥಾನಕ್ಕೆ ಬರಬೇಕು ಅಂದ್ರೆ ಅದು ದೊಡ್ಡ ಸಾಧನೆ. ಇದು ಆ ಸಮುದಾಯಕ್ಕೆ ಮಾಡಿದ ಅವಮಾನ. ಇಡೀ ದೇಶ ಇದನ್ನು ಖಂಡಿಸಬೇಕು. ಜೊತೆಗೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಂದೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳಬೇಕು. ನಾನು ಪ್ರಧಾನಿ ಅವರಿಗೆ ಪತ್ರ ಬರೆಯುತ್ತೇನೆ. ಕೇಂದ್ರ ಗೃಹ ಸಚಿವರಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.


