ಶಿವಮೊಗ್ಗ: ಚುನಾವಣಾ ರಾಜಕೀಯಕ್ಕೆ ಇನ್ಮುಂದೆ ಸ್ಪರ್ಧಿಸಲ್ಲ ಅಣ್ಣಾವ್ರ ಸೊಸೆ ಗೀತಾ ಶಿವರಾಜ್ ಕುಮಾರ್ ಘೋಷಣೆ ಮಾಡಿದ್ದಾರೆ.
2024ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ನಿಂತು ಸೋತಿದ್ದ ಗೀತಾ ಶಿವರಾಜ್ ಕುಮಾರ್ ಅವರು, ಇದೀಗ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ, ಆದರೆ ನಿಮ್ಮೆಲ್ಲರ ಜೊತೆಗೆ ನಿಂತಿರುತ್ತೇನೆ. ಮುಂದಿನ ಚುನಾವಣೆಗೆ ಬಂದು ಕ್ಯಾಂಪೇನ್ ಮಾಡುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಿ ಮಂಜುನಾಥ ಭಂಡಾರಿಗೂ ನಾನು ತೊಂದರೆ ಕೊಡುವುದಿಲ್ಲ ಎಂದರು.
ಮಹಿಳೆಯರು ಎಂದಿಗೂ ಅಬಲೆಯರಲ್ಲ, ಎಲ್ಲರೂ ಸಬಲೆಯರೇ. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಶ್ವೇತಾ ಬಂಡಿಯನ್ನು ನಾನು ಬಲ್ಲೆ. ನಿಮ್ಮ ಕಷ್ಟಗಳಿಗೆ ನಾನು ಸ್ಪಂದಿಸುತ್ತೇನೆ. ಏನೇ ಕಷ್ಟವಿದ್ದರೂ ಮಧು ಬಂಗಾರಪ್ಪ ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳಿ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದರು.


