ಮಂಡ್ಯ: ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಸಚಿವರನ್ನಾಗಿ ಮಾಡಿ ಎಂದು ನೀವೆಲ್ಲ ಹೇಳುತ್ತಿದ್ದೀರಿ. ಅವರನ್ನು ಸಚಿವರನ್ನಾಗಿ ಮಾಡ್ತೇವೆ. ಆದರೆ, ಈಗಲ್ಲ. ಈಗ ಅದಕ್ಕೆ ಸಮಯವಲ್ಲ. ಮುಂದೆ ಸಚಿವ ಸಂಪುಟದ ಪುನಾರಚನೆ ಮಾಡುವ ಸಂದರ್ಭದಲ್ಲಿ ಖಂಡಿತ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಮಳವಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಮಳವಳ್ಳಿ ಕ್ಷೇತ್ರವು ನನ್ನದೇ ಕ್ಷೇತ್ರ ಇದ್ದ ಹಾಗೆ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುತ್ತೇನೆ ಎಂದು ಹೇಳಿದರು.
ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಕೆಲಸ ಮಾಡಿದೆ. ಹೆಚ್ಡಿ ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ಇಂತಹ ಯೋಜನೆ ತಂದಿದ್ದಾರಾ? ಅನ್ನಭಾಗ್ಯ ಯೋಜನೆ ನೀಡಿದ್ದು ನಮ್ಮ ಸರ್ಕಾರ. 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು. ಹಣ ನೀಡುತ್ತೇವೆ ಉಳಿದ ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಿ ಎಂದಿದ್ದೆವು. ಮೊದಲು ಕೊಡುತ್ತೇವೆ ಎಂದಿದ್ದ ಕೇಂದ್ರ ಮತ್ತೆ ತಿರಸ್ಕರಿಸಿತು. ಇಂತಹ ಬಿಜೆಪಿಯವರಿಗೆ ಮತ ಹಾಕಬೇಕಾ. ಬಡವರಿಗೆ ಅಕ್ಕಿ ಕೊಡದ ಬಿಜೆಪಿಗೆ ಮತ ಹಾಕಬಾರದು ಎಂದರು.
ನಾವು ಬಿಜೆಪಿ, ಜೆಡಿಎಸ್ನಂತೆ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳವವರು ಅಲ್ಲ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. 155 ಕೋಟಿ ಜನರು ಇಲ್ಲಿಯವರೆಗೂ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದೀಗ ಕುಮಾರಸ್ವಾಮಿ ಅಶೋಕ ಜೊತೆ ಆಗಿದ್ದಾರೆ. ಕೋಮುವಾದಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದರು.
ಹಿಂದೆ ದೇವೇಗೌಡರು ನಾನು ಮುಸ್ಲಿಮನಾಗಿ ಹುಟ್ಟುವೆ ಎಂದಿದ್ದರು. ಈಗ ಚುನಾವಣೆಗಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಈಗ ಜಾತ್ಯತೀತೆ ಬಗ್ಗೆ ಮಾತಾಡುವ ನೈತಿಕ ಹಕ್ಕು ನಿಮಗೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ಗೆ ಮತ ಹಾಕಬೇಡಿ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದರು.