ಹುಬ್ಬಳ್ಳಿ : ಬೇರೆ ಜಿಲ್ಲೆಯಲ್ಲಿ ಬೈಕ್ ಕದ್ದು, ಅದೇ ಬೈಕ್ ಮೇಲೆ ಬಂದು ಹುಬ್ಬಳ್ಳಿಯ ಗಲ್ಫ್ ಮೈದಾನ ಬಳಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಪರಾರಿಯಾದ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಹಿಳೆಯ ಕೊರಳಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡ ಕೇಶ್ವಾಪೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ರಾಣೆಬೆನ್ನೂರು ಮೂಲದ ಇಬ್ಬರ ಆರೋಪಿಗಳಾದ ಆಕಾಶ್ ಮುಧೋಳಕರ್ (23) ಹಾಗೂ ಪ್ರವೀಣ್ ಹಡಗಲಿ (27) ಎಂಬುವರನ್ನು ಬಂಧಿಸಿದ್ದಾರೆ. ತುಮಕೂರಿ ಜಿಲ್ಲೆಯ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಡ್ಯೂಕ್ ಬೈಕ್ ಕಳ್ಳತನ ಪ್ರಕರಣ ಈ ಕಳ್ಳರ ಮೇಲೆ ದಾಖಲಾಗಿತ್ತು. ಅಲ್ಲಿಂದ ಬೈಕ್ ಕದಿದ್ದ ಚಾಲಾಕಿಗಳು ಅದೆ ಬೈಕ್ ಬಳಕೆ ಮಾಡಿ ಹುಬ್ಬಳ್ಳಿಯಲ್ಲಿ ಗೋಲ್ಡ್ ಚೈನ್ ಸ್ನಾಚಿಂಗ್ ಕೃತ್ಯ ಎಸಗಿ ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಕೇಶ್ವಾಪೂರ್ ಠಾಣೆಯ ಪೊಲೀಸರು ತಮ್ಮ ಧಿಮಂತಿಕೆ ಹಾಗೂ ತಾಂತ್ರಿಕ ಸಹಾಯದಿಂದ ಆರೋಪಿಗಳನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಮೇಲೆ ರಾಣೆಬೆನ್ನೂರು, ಉಡುಪಿ, ಶಿವಮೊಗ್ಗ ಹಾಗೂ ಮಣಿಪಾಲದಲ್ಲಿ ಕೂಡ ಬೈಕ್ ಕಳ್ಳತನ ಹಾಗೂ ಸರಗಳ್ಳತನದ ಪ್ರಕರಣಗಳು ದಾಖಲಾಗಿರುವ ಸತ್ಯಾಂಶ ಈಗ ವಿಚಾರಣೆ ವೇಳೆ ಬೆಳಕಿಗೆ ಬಂದಿವೆ. ಇನ್ನೂ ಕಳ್ಳತಕ್ಕೆ ಬಳಕೆಯಾಗಿದ ಬೈಕ್ ಹಾಗೂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.