ಮನರಂಜನೆಸಿನಿಮಾ

ಡಿ ಬಾಸ್ ಬೆಳ್ಳಿ ಪರ್ವ..25 ವರ್ಷ ಜರ್ನಿ ಶ್ರೀರಂಗನ ನೆಲೆಯಲ್ಲಿ ಡಿ-25 ಸಂಭ್ರಮ

ಬೆಂಗಳೂರು : ಸ್ನೇಹಿತರ ಕಷ್ಟಕ್ಕೆ ಸ್ಪಂದಿಸುವ ಗುಣ, ಸಹಾಯ ಹಸ್ತದಿಂದಲೇ ಎಲ್ಲರಿಗೂ ಅತ್ಯಾಪ್ತರಾಗುವ ದರ್ಶನ್ ತೂಗುದೀಪ ಅವರು ಲೈಟ್‌ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟು, ಅಲ್ಲಿಂದ ‘ಕಾಟೇರ’ ಸಿನಿಮಾವರೆಗಿನ 25ವರ್ಷಗಳ ಸಿನಿ ಜರ್ನಿ ಪೂರೈಸಿದ್ದಾರೆ. ಇದರೊಂದಿಗೆ ಅವರ ಕಾಟೇರ ಸಿನಿಮಾ ಜನಮನ್ನಣೆ ಗಳಿಸುವಲ್ಲಿ ಸಫಲವಾಗಿದೆ. ನಟ ದರ್ಶನ್ ಅವರು ಕನ್ನಡ ಇಂಡ್ರಸ್ಟ್ರಿಗೆ ಬಂದು 25ವರ್ಷಗಳು ಕಳೆದ ಪ್ರಯುಕ್ತ ಅವರ  ಸ್ನೇಹಿತರು ಮತ್ತು ಅಭಿಮಾನಿಗಳು ಸೇರಿ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ್ಣದಲ್ಲಿ ಹಮ್ಮಿಕೊಂಡಿದ್ದಾರೆ.

ಅಂದು ಲೈಟ್ ಬಾಯ್ ಆಗಿ 70ರೂಪಾಯಿ ಗಳಿಸುತ್ತಿದ್ದ ದರ್ಶನ್ ಇಂದು ಐಶಾರಾಮಿ ಲ್ಯಾಂಬೋರ್ಗಿನಿ ಕಾರಿನ ಮಾಲೀಕರಾಗಿದ್ದಾರೆ. ”ಇಷ್ಟವಾಗಿದ್ದನ್ನು ಕಣ್ಮುಂದೆ ಕಾಣುವಂತೆ ಇಟ್ಟುಕೊಂಡಿರಿ, ಆಗಾಗ ನೋಡುತ್ತಲೇ ಇರಿ, ಒಂದಲ್ಲಾ ಒಂದು ದಿನ ನೀವು ಅದನ್ನು ಪಡೆಯುತ್ತೀರಿ, ಗುರಿ ಮುಟ್ಟುತ್ತೀರಿ” ಎಂದು ತಮ್ಮದೇ ದಾಟಿಯಲ್ಲಿ ಜೀವನ ಮತ್ತು ಗುರಿ ಬಗ್ಗೆ ಮಾತನಾಡುವ ದರ್ಶನ್ ಅವರು ತಮ್ಮ ಜರ್ನಿಯಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದಾರೆ.

ಸಣ್ಣ ಪುಟ್ಟ ಪಾತ್ರ ಮಾಡಿ, ನಂತರ ಹಿರೋ ಆಗಿ, ಇದೀಗ ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ಆಗಿ ತಮ್ಮ ಸಿನಿಮಾ, ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿಮಾನಿಗಳ ಪಾಲಿನ ‘ಡಿಬಾಸ್’ ಚಂದನವನದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಸ್ನೇಹಿತರ ಕಷ್ಟಕ್ಕೆ ಸ್ಪಂದಿಸುವ ಗುಣ, ಸಹಾಯ ಹಸ್ತದಿಂದಲೇ ಎಲ್ಲರಿಗೂ ಅತ್ಯಾಪ್ತರಾಗುವ ದರ್ಶನ್ ಅವರ ‘ಬೆಳ್ಳಿ ಪರ್ವ’ವು ಇದೇ ಫೆಬ್ರವರಿ 17ರಂದು ಶನಿವಾರ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ನಟ ದರ್ಶನ್ ಚಿತ್ರರಂಗದಲ್ಲಿ ಭರ್ತಿ 25 ವರ್ಷ ಕಳೆದಿದ್ದು, ಅವರ ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸ್ನೇಹಿತರು ನಿರ್ಧರಿಸಿದ್ದಾರೆ. ಇಂತಹ ಘಳಿಗೆಯಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಆಪ್ತರು ಹಾಗೂ ಹಿತೈಷಿಗಳು ‘ದರ್ಶನ್ ಬೆಳ್ಳಿ ಪರ್ವ’ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಹಳೇ ಮೈಸೂರು ಭಾಗದಲ್ಲಿ ಏರ್ಪಡಿಸಿದ್ದಾರೆ. ಅದ್ಧೂರಿಯಾಗಿ ನಡೆಯುವ ಈ ಸಮಾರಂಭಕ್ಕೆ ಲಕ್ಷಾಂತರ ಸೆಲೆಬ್ರೆಟಿಗಳು ಆಗಮಿಸಲಿದ್ದಾರೆ. ಶ್ರೀ ಆದಿಚುಂಚನಗಿರಿ ಸ್ವಾಮೀಜಿ, ಶ್ರೀ ಸುತ್ತೂರು ಶ್ರೀಗಳು, ಬೀಬಿಮಠದ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಾಜಕಾರಣಿಗಳ ಪೈಕಿ ಕಲಾವಿದೆ ಮತ್ತು ಸಂಸದೆ ಸುಮಲತಾ ಅಂಬರೀಶ್ ಉಪಸ್ಥಿತಿ ಇರಲಿದೆ.

ಶ್ರೀರಂಗ ಪಟ್ಟಣದಲ್ಲಿ ಶನಿವಾರ ಸಂಜೆ ದರ್ಶನ್ ಬೆಳ್ಳಿ ಪರ್ವ ನಡೆಯಲಿದೆ. ಇದು ಮಾತ್ರವಲ್ಲದೇ ಹಲವು ಸಾಮಾಜಿಕ ಕಾರ್ಯಕ್ರಮಗಳು ಇದೇ ವೇಳೆ ನಡೆಯಲಿವೆ ಎಂದು ದರ್ಶನ್ ಆಪ್ತರು ಮಾಹಿತಿ ನೀಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಅತಿಥಿಗಳು ಆಗಮಿಸಲಿದ್ದಾರೆ. ದರ್ಶನ್ ಬೆಳ್ಳಿ ಪರ್ವ ಆಯೋಜನೆಗೊಂಡಿರುವುದು ಫೆಬ್ರವರಿ 17ರಂದು ಇದಕ್ಕು ಮುನ್ನಾ ದಿನವೇ ಅಂದರೆ ಫೆಬ್ರವರಿ 16ರಂದು ನಟ ದರ್ಶನ್ ಅವರ ಹುಟ್ಟು ಹಬ್ಬವಿದೆ. ಈ ಭಾರಿ ಡಿಬಾಸ್ ಅಭಿಮಾನಿಗಳಿಗೂ ಈ ಬರ್ತ್‌ಡೆ ಮರುದಿನವೇ ನಡೆಯಲಿರುವ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಟೇರಾ ಸಕ್ಸಸ್ ಸಂಭ್ರಮಿಸಲಿದ್ದಾರೆ.

ಇನ್ನು ಚಿತ್ರರಂಗದಲ್ಲಿ ದರ್ಶನ್ ಜತೆ ಸದಾ ಗುರುತಿಸಿಕೊಳ್ಳುವ ಅವರ ಸ್ನೇಹಿತರು, ಆಪ್ತರು ಆಗಿರುವ ನಟರಾದ ಧನಂಜಯ್, ಸತೀಶ್ ನೀನಾಸಂ, ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಶಿವರಾಜ್ ಕೆ.ಆರ್‌.ಪೇಟೆ ಸೇರಿದಂತೆ ಅನೇಕ ನಟ ನಟಿಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೆಲವು ನಟಿ ಮಣಿಯರು ಸಹ ವೇದಿಕೆ ಮೇಲೆ ದರ್ಶನ್ ಸಿನಿಮಾಗಳ ಹಾಡುಗಳಿಗೆ ಮನಮೋಹಕವಾಗಿ ಹೆಜ್ಜೆ ಹಾಕಲಿದ್ದಾರೆ. ಒಟ್ಬಲ್ಲಿ ಡಿ-25 ಬೆಳ್ಳಿ ಪರ್ವ ಕನ್ನಡ ಚಿತ್ರರಂಗದಲ್ಲೊಂದು ಹೊಸ ಪರ್ವ ಸೃಷ್ಟಿಸೋದು ಕೂಡ ಅಷ್ಟೆ ವಾಸ್ತವ.

 

Comments (0)

Your email address will not be published. Required fields are marked *

Back to top button