ಮೈಸೂರು ; ಮೈಸೂರಿನಲ್ಲಿ ವಿಮಾನ ಸೇವೆ ಆರಂಭವಾಗಿ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಕಾರಣದಿಂದಲೇ ಕೈಗಾರಿಕೆ ಅಭಿವೃದ್ಧಿಗೆ ವಿಮಾನಯಾನ ಸೇವೆ ಅನುಕೂಲವಾಗುತ್ತೆ ಅನ್ನೋ ಕಾರಣಕ್ಕೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯ ಕೂಡ ಆರಂಭವಾಗಿದೆ. ಆದರೆ ಈಗ ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ ಬಹುತೇಕ ಕಡಿಮೆಯಾಗಿದೆ. ಒಂದೆರಡು ವಿಮಾನ ಸೇವೆಯಷ್ಟೆ ಇದೆ.
ಇತ್ತೀಚಿಗೆ ಮೈಸೂರು ಕೂಡ ಬೆಂಗಳೂರಿನಷ್ಟೆ ವೇಗವಾಗಿ ಬೆಳೆಯುತ್ತಿದೆ. ಸಾಕಷ್ಟು ಕಾರ್ಖಾನೆಗಳು ತಲೆ ಎತ್ತಲು ಆರಂಭಿಸಿದೆ. ಆದ್ರೆ ಇಂತಹ ಮೈಸೂರು ನಗರಕ್ಕಿದ್ದ ವಿಮಾನಯಾನ ಸೇವೆ ದಿಢೀರನೆ ರದ್ದಾಗಿದೆ.
ಮೈಸೂರಿನ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ಇದ್ದರೂ ಅದು ಪ್ರಯೋಜನಕ್ಕೆ ಇರಲಿಲ್ಲ. ಇತ್ತೀಚಿಗೆ ವಿಮಾನ ಹಾರಾಟ ಸಾಕಷ್ಟು ಹೆಚ್ಚಾಗಿತ್ತು. ಇದು ಒಂದು ರೀತಿ ಕೈಗಾರಿಕೆ ಹಾಗೂ ಮೈಸೂರು ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲವಾಗಿತ್ತು.
ಆದರೆ ರನ್ ವೇ ಚಿಕ್ಕದು ಎಂಬ ಕಾರಣಕ್ಕೆ ದೊಡ್ಡ ವಿಮಾನಗಳ ಹಾರಾಟ ಕಷ್ಟವಾಗಿತ್ತು. ರನ್ ವೇ ದೊಡ್ಡದಾದ್ರೆ ವಿಮಾನ ಹಾರಾಟ ಸಂಖ್ಯೆ ಹೆಚ್ಚಾಗುತ್ತೆ, ಇದು ಕೈಗಾರಿಕೆ, ಪ್ರವಾಸೋದ್ಯಮ ದೃಷ್ಟಿಯಿಂದ ಮೈಸೂರಿಗೆ ಅನುಕೂಲವಾಗುತ್ತೆ ಎಂದೆ ಲೆಕ್ಕಾಚಾರ ಹಾಕಲಾಗಿತ್ತು. ಆದ್ರೀಗಾ ವಿಮಾನ ಹಾರಾಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೆ ಇದೆ.
ಮೊದಲಿಗೆ ಮೈಸೂರು ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ಚೆನೈಗೆ ವಿಮಾನಯಾನ ಸೇವೆ ಇತ್ತು. ಈಗ ಚೆನ್ನೈ ಹಾಗೂ ಹೈದರಾಬಾದ್ ಗೆ ಮಾತ್ರ ವಿಮಾನ ಸೇವೆಗಳು ಲಭ್ಯವಿದೆ.
ಇಷ್ಟೊಂದು ವಿಮಾನಗಳ ಹಾರಾಟ ಕಡಿಮೆಯಾಗಲು ಸಾಕಷ್ಟು ಕಾರಣಗಳಿದೆ. ಅದ್ರಲ್ಲಿ ವಿಮಾನಗಳ ಸಂಖ್ಯೆ ಕೂಡ ಕಡಿಮೆ ಇದೆ. ಇದಷ್ಟೆ ಅಲ್ಲದೆ ಹಲವು ತಾಂತ್ರಿಕ ಕಾರಣಗಳೂ ಇದೆ ಎಂದೆ ಹೇಳಲಾಗುತ್ತಿದೆ. ಆದ್ರೆ ಅಸಲಿಗೆ ಉಡಾನ್ ಯೋಜನೆಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಕಡಿತವಾಗಿದ್ರಿಂದ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಆದ್ರೆ ಮೈಸೂರು ಸಂಸದರು ಮಾತ್ರ ಕೆಲ ವಿಮಾನಗಳ ರಿಪೇರಿ ಕೆಲಸ ನಡೆಯುತ್ತಿದೆ. ಮುಂದಿನ ದಿನದಲ್ಲಿ ವಿಮಾನ ಸಂಖ್ಯೆ ಹೆಚ್ಚಿಸುತ್ತೇವೆ ಎನ್ನುತ್ತಿದ್ದಾರೆ.
ಮೈಸೂರಿನಲ್ಲಿ ಈಗಷ್ಟೇ ವಿಮಾನಯಾನ ಸೇವೆಗೆ ಬೇಡಿಕೆ ಹೆಚ್ಚಾಗುತ್ತಿತ್ತು. ಆದ್ರೆ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ವಿಮಾನ ಹಾರಾಟ ಸ್ಥಗಿತವಾಗಿರುವುದು ಬೇಸರದ ವಿಚಾರವಾಗಿದೆ.