ತಮಿಳುನಾಡು ರಾಜಕೀಯದಲ್ಲಿ ವಿಜಯ್-ತ್ರಿಷಾ ಸಂಚಲನ..!

ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಎನ್ಡಿಎ ಮೈತ್ರಿಕೂಟವನ್ನು ಸೇರಲಿದೆ ಎಂಬ ವರದಿಗಳನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಇತ್ತೀಚೆಗೆ ನಡೆದ ಜಿಲ್ಲಾ ಕಾರ್ಯದರ್ಶಿಗಳ ಸಭೆಯ ನಂತರ ಮಾತನಾಡಿದ ಅವರು, “ಬಿಜೆಪಿ ನಮ್ಮ ಸೈದ್ಧಾಂತಿಕ ಎದುರಾಳಿಯಾಗಿದ್ದು, ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯು 80 ಸ್ಥಾನಗಳು ಮತ್ತು ಡಿಸಿಎಂ ಹುದ್ದೆಯ ಆಫರ್ ನೀಡಿದೆ ಎಂಬುದು ಕೇವಲ ವದಂತಿ ಎಂದು ತಿಳಿಸಿದ್ದಾರೆ.
ವಿಜಯ್ ಅವರು ಈಗಾಗಲೇ ಘೋಷಿಸಿರುವಂತೆ, 2026ರ ಚುನಾವಣೆಯಲ್ಲಿ ಅವರ ಪಕ್ಷವು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ. ಡಿಎಂಕೆ ಪಕ್ಷವನ್ನು ತಮ್ಮ ಪ್ರಮುಖ ರಾಜಕೀಯ ಶತ್ರು ಎಂದು ಕರೆದಿರುವ ಅವರು, ಈ ಚುನಾವಣೆಯನ್ನು ‘ಶುದ್ಧ ಶಕ್ತಿ’ (TVK) ಮತ್ತು ‘ದುಷ್ಟ ಶಕ್ತಿ’ (DMK) ನಡುವಿನ ಹೋರಾಟ ಎಂದು ಬಣ್ಣಿಸಿದ್ದಾರೆ. ಉತ್ತರ ಚೆನ್ನೈನ ಯಾವುದಾದರೂ ಒಂದು ಕ್ಷೇತ್ರದಿಂದ ವಿಜಯ್ ಸ್ವತಃ ಕಣಕ್ಕಿಳಿಯುವ ಸಾಧ್ಯತೆಯಿದೆ.
ನಟಿ ತ್ರಿಷಾ ಅವರು ರಾಜಕೀಯಕ್ಕೆ ಬರಲಿದ್ದಾರೆ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಗಳ ಬಗ್ಗೆ ಸ್ವತಃ ತ್ರಿಷಾ ಅವರ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ. ತ್ರಿಷಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಮತ್ತು ಸದ್ಯಕ್ಕೆ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಅವರು ತಿಳಿಸಿದ್ದಾರೆ.




