ಕರಾವಳಿ: ಮೀನುಗಾರರ ದಶಕಗಳ ಕನಸಾದ ಬೋಟ್ ಆಂಬ್ಯುಲೆನ್ಸ್ ಯೋಜನೆಗೆ ಸರ್ಕಾರದಿಂದ ಭರವಸೆ ಸಿಕ್ಕಿದ್ದರೂ, ಅದು ಕಾರ್ಯರೂಪಕ್ಕೆ ಬರಲು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗೆ ಕಾಯುತ್ತಾ ಕಾಲಹರಣ ಮಾಡುವ ಬದಲು ಮಂಗಳೂರಿನ ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದವರು ಸ್ವಯಂಪ್ರೇರಿತರಾಗಿ ಕರಾವಳಿಯ ಮೊದಲ ಬೋಟ್ ಆಂಬ್ಯುಲೆನ್ಸ್ ಅನ್ನು ಸಿದ್ಧಪಡಿಸಿದ್ದಾರೆ.
ಸರ್ಕಾರದ ವಿಳಂಬ ನೀತಿಗೆ ಸೆಡ್ಡು ಹೊಡೆದ ಮೀನುಗಾರರ ಈ ಮಾದರಿ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಸಮುದ್ರ ಅಥವಾ ನದಿಯಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಅನಿರೀಕ್ಷಿತ ಅವಘಡಗಳು ಸಂಭವಿಸಿದರೆ ಅಥವಾ ಮೀನುಗಾರರಿಗೆ ಸಮುದ್ರದ ಮಧ್ಯದಲ್ಲೇ ತುರ್ತು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ, ಅವರಿಗೆ ತಕ್ಷಣದ ವೈದ್ಯಕೀಯ ನೆರವು ನೀಡುವುದು ಈ ಬೋಟ್ ಆಂಬ್ಯುಲೆನ್ಸ್ನ ಮುಖ್ಯ ಉದ್ದೇಶವಾಗಿದೆ.
ಜೀವ ರಕ್ಷಣೆಗೆ ಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಈ ಬೋಟ್ನಲ್ಲಿ ಅಳವಡಿಸಲಾಗಿದ್ದು, ಅಪಾಯದ ಸಮಯದಲ್ಲಿ ಮೀನುಗಾರರ ಪ್ರಾಣ ಉಳಿಸಲು ಇದು ಟೈಮ್ ಮಿಷಿನ್ನಂತೆ ಕೆಲಸ ಮಾಡಲಿದೆ. ಮೀನುಗಾರರ ಈ ಸ್ವಾವಲಂಬಿ ಹೆಜ್ಜೆ ಇಡೀ ರಾಜ್ಯಕ್ಕೆ ಪ್ರೇರಣೆಯಾಗಿದ್ದು, ಸಮುದ್ರದ ಅಲೆಗಳ ನಡುವೆ ಕಾವಲುಗಾರನಂತೆ ಈ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸಲಿದೆ


