ಸಿನಿಮಾ ರಂಗದ ಗ್ಲಾಮರ್ ಲೋಕದ ಹಿಂದೆ ಕರಾಳ ಮುಖವೊಂದು ಅಡಗಿದೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದೀಗ ಬಹುಭಾಷಾ ನಟಿ ಐಶ್ವರ್ಯ ರಾಜೇಶ್ ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಅವರು ಎದುರಿಸಿದ ಅಸಭ್ಯ ವರ್ತನೆ ಮತ್ತು ಕಾಸ್ಟಿಂಗ್ ಕೌಚ್ನಂತಹ ಕಹಿ ಘಟನೆಗಳು ಇಂದಿಗೂ ಅವರ ಮನಸ್ಸಿನಲ್ಲಿ ಮಾಸದ ಗಾಯದಂತೆ ಉಳಿದುಕೊಂಡಿವೆ. ಮುಜುಗರ ಉಂಟುಮಾಡುವ ಕೆಲ ಕಾರಣಗಳಿಂದ ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿರುವುದಾಗಿ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯ ರಾಜೇಶ್ ಅವರು ತಮ್ಮ ಆರಂಭಿಕ ದಿನಗಳ ಫೋಟೊಶೂಟ್ ಒಂದರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಣ್ಣನ ಜೊತೆಗೆ ಸ್ಟುಡಿಯೋಗೆ ಹೋದಾಗ, ಅಣ್ಣನನ್ನು ಹೊರಗಡೆ ಕೂರಿಸಿ ಇವರನ್ನು ಮಾತ್ರ ಒಳಗಡೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ಅತ್ಯಂತ ತುಂಡು ಉಡುಪನ್ನು ನೀಡಿ, ಇದನ್ನು ಧರಿಸಿಕೊಂಡು ಬಾ, ನಿನ್ನ ಬಾಡಿ ಹೇಗಿದೆ ಎಂದು ನೋಡಬೇಕು ಎಂದು ಒತ್ತಾಯಿಸಿದ್ದರು. ಯಾವ ಆಂಗಲ್ನಲ್ಲಿ ಹೇಗೆ ಕಾಣುತ್ತೀಯಾ ಎಂಬ ನೆಪವೊಡ್ಡಿ ಮೂವರು ವ್ಯಕ್ತಿಗಳು ಐಶ್ವರ್ಯ ಅವರನ್ನು ಆ ಉಡುಪು ಧರಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಆ ಕ್ಷಣದಲ್ಲಿ ಚಾಣಾಕ್ಷತನದಿಂದ ನಾನು ಅಣ್ಣನನ್ನು ಕೇಳಿ ಬರುತ್ತೇನೆ ಎಂದು ಅಲ್ಲಿಂದ ಹೊರಬಂದು ಅಪಾಯದಿಂದ ಪಾರಾಗಿದ್ದರು.
ಕೇವಲ ಆಮಿಷಗಳಷ್ಟೇ ಅಲ್ಲದೆ, ಚಿತ್ರೀಕರಣದ ಸೆಟ್ಗಳಲ್ಲಿ ನಡೆಯುವ ಅವಮಾನದ ಬಗ್ಗೆಯೂ ನಟಿ ಧ್ವನಿ ಎತ್ತಿದ್ದಾರೆ. ಒಮ್ಮೆ ಕೇವಲ 10 ನಿಮಿಷ ತಡವಾಗಿ ಸೆಟ್ಗೆ ಬಂದಿದ್ದಕ್ಕೆ ನಿರ್ದೇಶಕರೊಬ್ಬರು ನೂರಾರು ಸಹ ಕಲಾವಿದರ ಮುಂದೆ ಇವರನ್ನು ಕಟುವಾಗಿ ಬೈದಿದ್ದರಂತೆ. ಮತ್ತೊಬ್ಬ ನಟಿಯ ಜೊತೆ ಹೋಲಿಕೆ ಮಾಡಿ ಹೀಯಾಳಿಸಿದ ಆ ಘಟನೆ ನೆನಪಿಸಿಕೊಂಡು ಅದೇ ಪರಿಸ್ಥಿತಿ ಬಂದಿದ್ದರೆ ಖಂಡಿತವಾಗಿಯೂ ಸುಮ್ಮನಿರುತ್ತಿರಲಿಲ್ಲ ಎಂದು ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾರೆ.
ಪ್ರಸ್ತುತ ಐಶ್ವರ್ಯ ರಾಜೇಶ್ ಅವರು ತಮಿಳಿನ ‘ತೀಯಾವರ್ ಕುಲೈಗಲ್ ನಡುಂಗ’ ಹಾಗೂ ಭರತ್ ದರ್ಶನ್ ನಿರ್ದೇಶನದ ‘ಓ..! ಸುಕುಮಾರಿ’ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಎಷ್ಟೇ ಅಡ್ಡಿಗಳು ಬಂದರೂ, ಪ್ರತಿಭೆಯ ಮೇಲೆ ನಂಬಿಕೆಯಿಟ್ಟು ಇಂದು ದಕ್ಷಿಣ ಭಾರತದ ಪ್ರಮುಖ ನಟಿಯಾಗಿ ಬೆಳೆದು ನಿಂತಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಎದುರಿಸುವ ಇಂತಹ ಸಮಸ್ಯೆಗಳ ವಿರುದ್ಧ ಐಶ್ವರ್ಯ ಅವರು ಧೈರ್ಯವಾಗಿ ಮಾತನಾಡಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.


