ಬೆಂಗಳೂರು: ತುಮಕೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ನಿನ್ನೆ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ನಾನು ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಾನು ಬರುವ ದಾರಿಯಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಬರುತ್ತಿತ್ತು. ಸ್ಥಳೀಯ ಶಾಸಕ ಷಡಕ್ಷರಿ ಹಾಗೂ ನಾನು ಒಟ್ಟಿಗೆ ಇದ್ದೆವು. ಅವರು ಕರೆದು ಹೂವು ಹಾಕಿ ಅಂದರು. ರಾಣಿ ಅಬ್ಬಕ್ಕ ಮೆರವಣಿಗೆ ಆದ್ದರಿಂದ ಹೂವು ಹಾಕಿದೆ ಅಷ್ಟೆ.
ಇದರ ಮೇಲೆ ಯಾರಾದರೂ ವಿವಾದ ಮಾಡಿದರೆ ಮಾಡಿಕೊಳ್ಳಲಿ, ನನಗೇನು ತೊಂದರೆ ಇಲ್ಲ. ನಾನು ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ನಾನು ಸಾಯುತ್ತೇನೆ. ನಮಗೂ ರಾಜಕೀಯ ವಿರೋಧಿಗಳು ಇರುತ್ತಾರೆ. ಅದು ಪಕ್ಷದ ಒಳಗೂ ಇರಬಹುದು, ಪಕ್ಷದ ಹೊರಗೂ ಇರಬಹುದು. ಪರಮೇಶ್ವರ್ ಏನು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. 35 ವರ್ಷಗಳಿಂದ ನನ್ನ ರಾಜಕೀಯ ಏನು ಎಂಬುದು ಗೊತ್ತಿದೆ. ಅದನ್ನು ಪದೇಪದೆ ಸಾಬೀತು ಮಾಡಬೇಕಾಗಿಲ್ಲ ಎಂದು ಪರಮೇಶ್ವರ್ ಹೇಳಿದರು.
ಇನ್ನು ನಿನ್ನೆ ತಿಪಟೂರು ಎಬಿವಿಪಿಯಿಂದ ಗಣೇಶ ಪಂಜಿನ ಮೆರವಣಿಗೆ ಮಂಗಳವಾರ ರಾತ್ರಿ ನಡೆದಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಗೃಹ ಸಚಿವ ಪರಮೇಶ್ವರ್ ಅವರು ರಾಣಿ ಅಬ್ಬಕ್ಕನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.