ಮಂಗಳೂರು: ಪಶ್ಚಿಮ ವಲಯದ ಡಿಐಜಿ ಆಗಿದ್ದ ಡಾ. ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆ ಆಗಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ವರ್ಗಾವಣೆ ಆಗಿ ಬಂದಿರುವ ಅಮಿತ್ ಸಿಂಗ್ ಅವರು ಸೋಮವಾರ ಪಶ್ಚಿಮ ವಲಯದ ಡಿಐಜಿ ಆಗಿ ಅಧಿಕಾರ ವಹಿಸಿಕೊಂಡರು.
ಈ ವೇಳೆ ಅವರು ಮಾತನಾಡಿ, ಪಶ್ಚಿಮ ವಲಯದಲ್ಲಿ ಇರುವ ಡ್ರಗ್ಸ್, ಕೋಮುವಾದ ಹಾಗೂ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಸೈಬರ್ ಅಪರಾಧಗಳ ಬಗ್ಗೆ ತೀವ್ರವಾದ ನಿಗಾ ವಹಿಸಲಾಗುವುದು ಎಂದರು.

ಹತ್ತು ವರ್ಷಗಳ ಹಿಂದೇ ಈ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು, ಆಗಿನ ಮಂಗಳೂರಿಗೂ ಈಗನ ಮಂಗಳೂರಿಗೂ ಸಾಕಷ್ಟು ಬದಲಾವಣೆ ಕಾಣುತ್ತಿವೆ. ಅಪರಾಧ ಪ್ರಕರಣಗಳೂ ಸಾಕಷ್ಟು ಬದಲಾಗಿದ್ದು, ಕಳ್ಳತನ, ಸೈಬರ್ ಅಪರಾಧಗಳು, ವೈಟ್ ಕಾಲರ್ ಅಪರಾಧಗಳು ಹೆಚ್ಚಿವೆ. ಇಲ್ಲಿನ ಎಸ್ಪಿ, ಇನ್ ಸ್ಪೆಕ್ಟರ್ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಾವಳಿ ಇದೆ. ಮುಖ್ಯವಾಗಿ ನಗರ ಭಾಗದಲ್ಲಿ ಡ್ರಗ್ಸ್ ದೊಡ್ಡ ಸಮಸ್ಯೆಯಾಗುತ್ತಿದೆ. ಡ್ರಗ್ಸ್ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಇದರ ಬಗ್ಗೆ ಜಾಗೃತವಾಗಿದ್ದು ಕ್ರಮ ವಹಿಸಲಾಗುವುದು ಎಂದರು.
ಕೋಮವಾದಕ್ಕೆ ಸಂಬಂಧಿಸಿದ ಘಟನೆಗಳ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ನೈತಿಕ ಪೊಲೀಸ್ಗಿರಿ ವಿರುದ್ಧವೂ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ. ನಾನು ಎಎಸ್ಪಿಯಾಗಿದ್ದಾಗ ಕೂಡ ನೈತಿಕ ಪೊಲೀಸ್ಗಿರಿ ಘಟನೆಗಳು ನಡೆದಿದ್ದವು ಎಂದರು.
ಸೈಬರ್ ಕ್ರೈಂ ಗಳು ಹೆಚ್ಚುತ್ತಿರುವ ಬಗ್ಗೆ ಜನರು ಕೂಡ ಜಾಗೃತರಾಗಿರಬೇಕು. ಗುಪ್ತಚರ ವಿಭಾಗವನ್ನು ಜಾಗೃತ ಮಾಡಿ ಯಾವುದೇ ಕೋಮು ಸಂಬಂಧಿ ಘಟನೆ ನಿಯಂತ್ರಣಕ್ಕೆ ಅದ್ಯತೆ ನೀಡಲಾಗುತ್ತದೆ. ತಲೆಮರೆಸಿಕೊಂಡಿರುವವರ ಪತ್ತೆಗೆ ಕೂಡ ಗಮನ ಹರಿಸಲಾಗುವುದು ಎಂದರು. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕುಮಾರ್ ಇದ್ದರು.