ಮೈಸೂರು : ಕನ್ನಡ ಚಿತ್ರರಂಗದ ಸಾಹಸಸಿಂಹ ರಾಮಾಚಾರಿಯಾಗಿ ಕನ್ನಡಿಗರ ಮನಗೆದ್ದು ಯಜಮಾನನಾಗಿ ಅಭಿಮಾನಿಗಳ ಮನ ಮಂದಿರದಲ್ಲಿ ಮನೆಮಾತಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 14 ವರ್ಷಗಳು ಕಳೆದಿದೆ , ಅಭಿಮಾನಿಗಳು ಸದಾ ಸಮಾಧಿ ಸ್ಥಳಕ್ಕೆ ಹರಿದು ಬರುತ್ತಿರುತ್ತಾರೆ .ನೆಚ್ಚಿನ ನಟನಿಗೆ ಪೂಜೆ ಮಾಡಿ ಗೌರವ ಸಲ್ಲಿಸುತ್ತಾರೆ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ, ಅನ್ನದಾನ ಕಾರ್ಯಕ್ರಮಗಳನ್ನ ಪ್ರತಿ ವರ್ಷ ಆಯೋಜಿಸಲಾಗುತ್ತದೆ .
14 ವರ್ಷದ ಪುಣ್ಯಸ್ಮರಣೆ ದಿನವಾದ ಇಂದು ಕೂಡ ಅಭಿಮಾನಿಗಳು ಸಮಾಧಿ ಪೂಜೆ ಸಲ್ಲಿಸಿದ್ದು, ದೀಪೋತ್ಸವದಂತಹ ಕಾರ್ಯಗಳನ್ನು ಕೂಡ ಆಯೋಜನೆ ಮಾಡಲಾಗಿತ್ತು .10 ಗುಂಟೆ ಜಾಗದಲ್ಲಿ ವಿಷ್ಣು ಸಮಾಧಿ ನಿರ್ಮಾಣವಾಗಬೇಕು ಅನ್ನೋ ವಿವಾದದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೇ ಅಭಿಮಾನಿಗಳು ದಾದಾಗೆ ನಮನ ಸಲ್ಲಿಸಿದರು.

ಅಭಿನಯ ಭಾರ್ಗವ, ಅಭಿಮಾನಿಗಳ ‘ಕೋಟಿಗೊಬ್ಬ’, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ೧೪ನೇ ವರ್ಷದ ಪುಣ್ಯತಿಥಿ ಇವತ್ತು ಅಭಿಮಾನಿಗಳ ಪಾಲಿನ ‘ಹೃದಯವಂತ’ ಬಾರದ ಲೋಕಕ್ಕೆ ಪಯಣ ಬೆಳೆಸಿ ಇಂದಿಗೆ ೧೪ ವರ್ಷಗಳಾಗಿವೆ. ದೈಹಿಕವಾಗಿ ಡಾ.ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ಡಾ.ವಿಷ್ಣುವರ್ಧನ್ ಅವರ ೧೪ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ತಾರೆಯರು ‘ಆಪ್ತಮಿತ್ರ’ನ ಸ್ಮರಣೆ ಮಾಡಿದರು.

ಅಭಿಮಾನ್ ಸ್ಟುಡಿಯೋ ಜಾಗ ವಿವಾದ ಏನು ?
ವಿಷ್ಣುವರ್ಧನ್ ಅವರ ಸಮಾಧಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ಮಾಡಲಾಗಿದೆ. ಇಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ, ಈ ಸ್ಟುಡಿಯೊ ಜಾಗ ಇದೀಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣಕ್ಕೆ ಹಿನ್ನಡೆಗೆ ಕಾರಣವಾಗಿದೆ. ಸ್ಟುಡಿಯೋ ಕಾರ್ಯನಿರ್ವಹಣೆಯ ಸಂಬಂಧ ಸರಕಾರ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ತನಿಖಾ ತಂಡವು ಸ್ಟುಡಿಯೋದ 10 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಲು ಸೂಚಿಸಿತ್ತು. ಈ ಸಂದರ್ಭದಲ್ಲಿ ನಟ ಬಾಲಕೃಷ್ಣರ ಮಕ್ಕಳಿಂದ ಭೂಮಿ ಪರಭಾರೆಯ ಸೂಕ್ತ ದಾಖಲೆಗಳನ್ನಾಗಲೀ ದೃಢೀಕರಣ ಪತ್ರವನ್ನಾಗಲೀ ಮಾಡಿಸಿಕೊಳ್ಳದೆ ಎಡವಿತು. ಈ ಅವಕಾಶವನ್ನು ಬಳಸಿಕೊಂಡ ಬಾಲಕೃಷ್ಣ ಮಕ್ಕಳು 28.9.2015ರಲ್ಲಿ ಸರ್ಕಾರದ ಮುಟ್ಟುಗೋಲು ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮಂಜೂರಾದ ಭೂಮಿಯೂ ಈ ಹತ್ತು ಎಕರೆಯಲ್ಲೇ ಸೇರಿದ್ದರಿಂದ ಸ್ಮಾರಕ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಮೈಸೂರು ಭೂ ವಿವಾದ ಹೈಕೋರ್ಟ್ನಲ್ಲಿ!
ಮೈಸೂರು: ಮೈಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಮೈಸೂರು ತಾಲೂಕು ಚೌಡಳ್ಳಿಯಲ್ಲಿ 5 ಎಕರೆ ಭೂಮಿಯಲ್ಲಿ ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಿಸಲು ಕಂದಾಯ ಇಲಾಖೆಯು ವಾರ್ತಾ ಇಲಾಖೆಗೆ ಜಾಗ ಹಸ್ತಾಂತರಿಸಿದೆ. ಈ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಅವರ ಕುಟುಂಬದವರೂ ಒಪ್ಪಿದ್ದಾರೆ. ಶಂಕುಸ್ಥಾಪನೆಯೂ ಆಗಿದೆ. ಈ ಮಧ್ಯೆ ರಾಜ್ಯ ಸರಕಾರದ ಈ ಜಾಗದಲ್ಲಿ ಅನೇಕ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರು ಪರಿಹಾರಕ್ಕಾಗಿ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ. ಹಾಗಾಗಿ, ಸ್ಮಾರಕ ನಿರ್ಮಾಣ ವಿಳಂಬವಾಗಿದೆ.

ಒಟ್ನಲ್ಲಿ ವಿಷ್ಣು ಅಭಿಮಾನಿಗಳಿಗೆ ನಿರಾಸೆಯ ಮೇಲೆ ನಿರಾಸೆ ಆಗುತ್ತಲೇ ಇದೆ. ಇವತ್ತು ಸ್ಮಾರಕ ಆಗಬಹುದು ನಾಳೆ ಆಗಬಹುದು ಅಂತಲೇ 14 ವರ್ಷ ಕಳೆದಿದ್ದಾರೆ. ಆದಷ್ಟು ಬೇಗ ವಿಷ್ಣು ಸ್ಮಾರಕವಾಗಲಿ..ಈ ವಿಚಾರದಲ್ಲಿ ಸರ್ಕಾರ ಕೂಡ ಮಧ್ಯ ಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಅನ್ನೋದೇ ಎಲ್ಲರ ಆಶಯ.