ಮೈಸೂರು ; ಪ್ರಧಾನಿ ನರೇಂದ್ರ ಮೋದಿಯನ್ನ ಹೊಗಳುವ ಮೂಲಕ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಚಮಚಗಿರಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು ನೆಹರೂ ಇಂದಿರಾ ಗಾಂಧಿಗಿಂತ ಮೋದಿ ಸಾಧನೆ ಮಾಡಿದ್ದಾರಾ? ನೆಹರು ಇಂದಿರಾಗಾಂಧಿ ಬಡತನ ನಿರ್ಮೂಲನೆ ಮಾಡಿ ದೇಶವನ್ನ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಆದರೆ ದೇವಗೌಡರು ಮೋದಿಯನ್ನ ಕೊಂಡಾಡುತ್ತಿರುವುದು ವಿಪರ್ಯಾಸ ಎಂದರು.
ದೇವೇಗೌಡರಂತಹ ಹಿರಿಯ ನಾಯಕರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೆಚ್.ಡಿ ದೇವೇಗೌಡರು ಜಾತ್ಯತೀತ ಪದಕ್ಕೂ ತಿಲಾಂಜಲಿ ಇಟ್ಟಿದ್ದಾರೆ. ಮೋದಿಯಂತಹ ನಾಯಕನನ್ನ ಕಂಡಿರಲಿಲ್ಲ ಎಂದು ಚಮಚಗಿರಿ ಮಾಡುತ್ತಿದ್ದಾರೆ ಎಂದು ಹೆಚ್, ವಿಶ್ವನಾಥ್ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದರು.