ಹನುಮ ಧ್ವಜ ಹಾರಿಸುವವರೆಗೂ ಹೋರಾಟ ನಿಲ್ಲಲ್ಲ! ಮಂಡ್ಯದ ಗಲ್ಲಿಗಲ್ಲಿಯಲ್ಲೂ ಪೊಲೀಸರ ಹದ್ದಿನಕಣ್ಣು!

ಮಂಡ್ಯ: ಕೆರೆಗೋಡು ಗ್ರಾಮದಲ್ಲಿ ಮತ್ತೆ ಹನುಮಧ್ವಜ ಹಾರಿಸಬೇಕೆಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳಿಂದ ಸ್ವಯಂ ಪ್ರೇರಿತ ಮಂಡ್ಯ ನಗರ ಬಂದ್ಗೆ ಕರೆ ನೀಡಲಾಗಿದೆ.ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ನಗರದ ವರ್ತಕರು ಮತ್ತು ಅಂಗಡಿ ವ್ಯಾಪರಸ್ಥರಿಗೆ ಗುಲಾಬಿ ಹೂ ನೀಡಿ ಸ್ವಯಂ ಪ್ರೇರಿತ ಮಂಡ್ಯ ನಗರ ಬಂದ್ಗೆ ಮನವಿ ಮಾಡಿದರು.
ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ಎಚ್.ಆರ್. ಅರವಿಂದ್ ಮಾತನಾಡಿ, ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಮಾಡಿರುವ ಬಗ್ಗೆ, ಕೆರಗೋಡು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದರು ಬೆಲೆ ಕೊಡದ ಜಿಲ್ಲಾಡಳಿತ ಹಾಗು ಕಾಂಗ್ರೆಸ್ ಸರ್ಕಾರ ಹಿಂದೂಗಳ ದಮನಕಾರಿ ನೀತಿ ಅನುಸರಿಸುತ್ತಿದೆ, ಪಂಚಾಯಿತಿ ಸದಸ್ಯರ ನಿರ್ಣಯ ಹನುಮ ಧ್ವಜದ ಪರವಾಗಿದ್ದರೂ ಬೇಕೆಂದೇ ಗೊಂದಲ ಮೂಡಿಸುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಜನವರಿ 26 ರಂದು ರಾಷ್ಟ್ರೀಯ ಧ್ವಜ ಹಾರಿಸಿ ಗೌರವ ಸೂಚಿಸಲಾಯಿತು, ದೇಶ ಭಕ್ತಿಯ ಬಗ್ಗೆ ಮಂಡ್ಯದ ಜನರಿಗೆ ಕಾಂಗ್ರೆಸ್ ಪಾಠ ಮಾಡಬೇಕಿಲ್ಲ, ಭಾರತವನ್ನು ತುಂಡರಿಸುವ, ಕರ್ನಾಟಕವನ್ನು ಪ್ರತ್ಯೇಕ ರಾಷ್ಟ್ರ ಮಾಡುವ ಮಾತನಾಡಿರುವ ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರಭಕ್ತಿಯ, ಭಾರತ ಅಖಂಡತೆಯ ಬಗ್ಗೆ ಮಾತುಗಳು ಹಾಸ್ಯಾಸ್ಪದ, ರಾಮ ಭಕ್ತಿ-ರಾಷ್ಟ್ರ ಶಕ್ತಿ, ನಾವು ಹನುಮನ ನಾಡಿನವರು ಎಂದರು.




