ಗದಗ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದೆ. ಹಲವು ತಿಂಗಳ ಹಿಂದೆಯಷ್ಟೇ ಅನುದಾನದಲ್ಲಿ ತಾರತಮ್ಯ ಎಂದು ಸ್ವಪಕ್ಷದ ಅಧ್ಯಕ್ಷರ ವಿರುದ್ಧವೇ ಕಚೇರಿಗೆ ಬೀಗ ಜಡಿದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಮುಂದುವರೆದ ಭಾಗವಾಗಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಮತ್ತು ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ದಿಂಡೂರ್ ಪತಿ ಶಶಿಧರ್ ದಿಂಡೂರ ಸಾರ್ವಜನಿಕರ ಎದುರಲ್ಲಿಯೇ ಕಿತ್ತಾಟ ನಡೆಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲೆ ಇಬ್ಬರು ನಾಯಕರು ಏಕವಚನದಲ್ಲಿಯೇ ಕಿತ್ತಾಡಿಕೊಂಡಿದ್ದಾರೆ. ಸಾರ್ವಜನಿಕರ ಎದುರಲ್ಲಿ ಬೇಜವಾಬ್ದಾರಿ ವರ್ತನೆಯನ್ನು ತೋರಿದ್ದಾರೆ. ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರ ಮಾತಿಗೂ ಕೂಡ ಯಾವುದೇ ಬಿಜೆಪಿ ಸದಸ್ಯರು ಕಿಮ್ಮತ್ತು ನೀಡುತ್ತಿಲ್ಲ ಎನ್ನುವ ಆರೋಪವೂ ಇದೆ. ಸದ್ಯ ನಗರ ಸಭೆಯಲ್ಲಿ ಕಿತ್ತಾಟ ನಡೆದಿರುವುದು ವಿಪರ್ಯಾಸವೇ ಸರಿ. ಅಭಿವೃದ್ಧಿ ಮಾಡಲು ಮತ ಹಾಕಿದ್ರೆ ಬಿಜೆಪಿಯ ಸದಸ್ಯರು ಬರಿ ಕಚ್ಚಾಟದಲ್ಲಿ ಕಾಲ ಹರಣ ಮಾಡುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.