ರಾಜಕೀಯರಾಜ್ಯಸುದ್ದಿ

ಅನ್ಯಾಯ ಪ್ರಶ್ನಿಸಿದರೆ ದೇಶ ದ್ರೋಹ ಹಣೆಪಟ್ಟಿ ಕಟ್ಟುತ್ತಾರೆ : ಡಿಕೆ ಸುರೇಶ್

ಆನೇಕಲ್ : ರಾಜ್ಯದ ಜನರ ಹಿತ, ಕನ್ನಡಿಗರ ಗೌರವಕ್ಕಾಗಿ ನಾನು ಎಂದೂ ಹಿಂದೆ ಸರಿದಿಲ್ಲ. ಕೆಲವರು ನನ್ನ ಹೇಳಿಕೆಯನ್ನು ತಿರುಚಿ, ನಾನು ದೇಶದ ವಿಭಜನೆ ಹೇಳಿಕೆ ನೀಡಿದ್ದೇನೆಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ, ನನ್ನನ್ನ ನಾಯಕನನ್ನಾಗಿ ಬಿಂಬಿಸುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ, ನಾನು ಕನ್ನಡಕ್ಕಾಗಿ ಕರ್ನಾಟಕದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದನಿದ್ದೇನೆ. ರಾಜ್ಯದ ಯಾವ ಪೊಲೀಸ್ ಠಾಣೆಗಾದರೂ ದೂರು ಕೊಡಲಿ, ಯಾವ ಕೋರ್ಟಿನಲ್ಲಾದರೂ ದೂರು ನೀಡಲಿ ಆ ಕೇಸನ್ನ ಎದುರಿಸಲಿಕ್ಕೆ ಜನರ ಆಶೀರ್ವಾದದಿಂದ ಸಿದ್ದನಿದ್ದೇನೆ ಎಂದು ಅನೇಕಲ್​ನಲ್ಲಿ ಡಿಕೆ ಸುರೇಶ್​ ಹೇಳಿದರು.

ಬನ್ನೇರುಘಟ್ಟದ ಕಾವೇರಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ಅವರು,  ಉಳಿದ ವಿಚಾರಗಳನ್ನು ನಾನು ಚರ್ಚಿಸಲು ಹೋಗಲ್ಲ. ಕನ್ನಡಿಗರಿಗಾದ ಅನ್ಯಾಯವನ್ನು ಪ್ರಶ್ನಿಸಿದರೆ ದೇಶ ದ್ರೋಹದ ಹಣೆಪಟ್ಟಿಯನ್ನ ಬಿಜೆಪಿಯವರು ಕಟ್ಟುತ್ತಿದ್ದಾರೆ. ಈ ರಾಜ್ಯದಿಂದ 3-4 ಬಾರಿಗೂ ಮಿಗಲಾಗಿ 25 ಸ್ಥಾನಗಳನ್ನ ನೀಡಿದ್ದೇವೆ. ಅಖಂಡ ಕರ್ನಾಟಕದ ನಾಲ್ಕು ಲಕ್ಷ ಕೋಟಿ ತೆರಿಗೆಯ ಲೆಕ್ಕ ಕೊಡಿ ಎಂದು ಕೇಳಿದರೆ ದೇಶದ್ರೋಹಿ ಆಗ್ತೀನಾ? ರಾಜ್ಯದ ಪಾಲು ನೂರು ರೂ ಕೊಡಬೇಕಾದರೆ ಅದರಲ್ಲಿ ಕೇವಲ 75 ಪೈಸೆ ಕೊಟ್ಟಿದ್ದೀರಿ, ಅದೇ ಉತ್ತರ ಪ್ರದೇಶಕ್ಕೆ 100 ರೂ ಬದಲು 333 ರೂಗಳನ್ನ ನೀಡಿ ತಾರತಮ್ಯ ಮೆರೆದಿದ್ದೀರಿ, ನಿಮಗೆ ಕನ್ನಡಿಗರ ದುಡ್ಡು ಅಷ್ಟೊಂದು ಪುಗ್ಸಟ್ಟೆಯಾಗೋಯ್ತಾ? ಬಿಜೆಪಿ ನಾಯಕರೇ ನಾನು ಕೇಳಿದ್ದು ತಪ್ಪಾ ಎಂದು ಸಂಸದರು ಪ್ರಶ್ನಿಸಿದ್ದಾರೆ.

ಈ ರಾಜ್ಯದಲ್ಲಿ 220 ತಾಲೂಕುಗಳು ಬರಪೀಡಿತ ಅಂತ ಘೋಷಣೆಗೊಂಡಿವೆ, 10 ಪೈಸೆಯನ್ನೂ ಬಿಡುಗಡೆಗೊಳಿಸಲು ಸಿದ್ದರಿಲ್ಲದ ನೀವು ನಿಮಗೆ ಬೇಕಾದಾಗ ಕ್ಷಣಮಾತ್ರದಲ್ಲಿ ಮುಖ್ಯಮಂತ್ರಿಗಳನ್ನೇ ಬದಲಿಸ್ತೀರಿ. ಕನ್ನಡಿಗರ ಹಾಗು ಇಲ್ಲಿನ ರೈತರ ನೋವು, ಭವಣೆ ನಿಮಗೆ ಅರ್ಥವಾಗಲ್ಲವಾ? ಸಹಾಯ ಮಾಡಲು ನಿಮಗೆ ಏನೂ ಅನ್ನಿಸಲ್ವಾ? ಮೇಕೆದಾಟು ಅನುಷ್ಟಾನಗೊಳಿದಿ ಅಂದರೆ ಖ್ಯಾತೆ ತೆಗೀತೀರಿ. ನೀವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಾಸ್ಮೀರದಿಂದ ಕನ್ಯಾಕುಮಾರಿವರೆಗೂ ಗೊತ್ತಿದೆ.
ನಾನೊಬ್ಬ ಭಾರತದ ಕನ್ನಡಿಗ, ದಕ್ಷಿಣ ಭಾರತದ ಭಾವನೆಯನ್ನು ಹೇಳಿದರೆ ನಿಮಗೆ ದೇಶದ್ರೋಹ ಅಂತನ್ನಿಸ್ತದಾ? ಬಜೆಟ್ ನಿಙದ ಆದ ಅನ್ಯಾಯವನ್ನು ಮರೆಮಾಚಲು ನನ್ನ ಹೇಳಿಕೆಯನ್ನ ತಿರುಚಿ ನೀವು ಡೋಂಗೀ ಹಿಂದುತ್ವವನ್ನು ಹಿಡಿದುಕೊಂಡು ಹೊರಟಿದ್ದೀರಿ ಎಂದು ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

Comments (0)

Your email address will not be published. Required fields are marked *

Back to top button