ಮೈಸೂರು ; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ಸಾಲ ಮಾಡಿದ್ರು ತುಪ್ಪ ತಿನ್ನೋಕ್ಕಾಗಲ್ಲ ಎಂದು ಕೆಪಿಸಿಸಿ ವಕ್ತಾರ ಎಂ,ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇದೊಂದು ಕೇಸರೀಕರಣ ಪಾರ್ಟಿಯ ವಿದಾಯಕ ಬಜೆಟ್ . ನಿನ್ನೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಶದಾಯಕ ಬಜೆಟ್. ಯಾವ್ಯಾವ ಕಾಮಗಾರಿಗೆ ಎಷ್ಟೆಷ್ಟು ಹಣ ಮೀಸಲಿಡಬೇಕು ಎನ್ನೋದು ಬಜೆಟ್, ಆದರೆ ಇದ್ಯಾವುದೂ ಇಲ್ಲಿ ಪ್ರಸ್ತಾಪ ಆಗಲಿಲ್ಲ. ರೈಲ್ವೆ ಬಜೆಟ್ ಮಂಡಿಸಲು ಕಡಿಮೆ ಎಂದರೂ ಮೂರು ಗಂಟೆ ಬೇಕು. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಕೇವಲ ಅದೂ 59 ನಿಮಿಷದಲ್ಲಿ ಓದಿ ಕೈ ತೊಳೆದುಕೊಂಡರು. ಅತ್ಯಂತ ಕಡಿಮೆ ಅವಧಿಯಲ್ಲಿ ಬಜೆಟ್ ಮಂಡಿಸಿದ ಕೀರ್ತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.
ನಿರುದ್ಯೋಗ, ಶಿಕ್ಷಣ, ರೈತರ ಸಮಸ್ಯೆ, ಇದ್ಯಾವುದರ ಬಗ್ಗೆಯೂ ಈ ಬಜೆಟ್ ನಲ್ಲಿ ಚರ್ಚೆ ಆಗಿಲ್ಲ, ಯಾವುದೇ ಅನುದಾನ ನೀಡಿಲ್ಲ. ಚಪ್ಪಲಿ ಹಾಕೋರು, ಮೊಬೈಲ್ ಇರುವವರು ಬಡವರಲ್ವಂತೆ, 25ಕೋಟಿಯಷ್ಟು ಜನ ಬಡತನ ರೇಖೆಗಿಂತ ಮೇಲೆ ಎತ್ತಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಈ ಬಜೆಟ್ 30% ಸಾಲದ ಬಜೆಟ್. 2014 ಮಾರ್ಚ್ ವರೆಗೆ ದೇಶದ ಸಾಲ 53 ಲಕ್ಷ ಕೋಟಿ ರೂ. ಇತ್ತು. 2024ರಲ್ಲಿ 195 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.
ಸಾಲ ಮಾಡಿ ತುಪ್ಪ ತಿನ್ನು ಅಂತಾರೆ, ಸಾಲ ಮಾಡಿದ್ರು ತುಪ್ಪ ತಿನ್ನೋಕು ಆಗಲ್ಲ, ನೀವು ಅಧಿಕಾರಕ್ಕೆ ಬಂದಾಗಿನಿಂದ ಸೂಸೈಡ್ ರೇಟ್ 25% ಜಾಸ್ತಿ ಇದೆ. 16ರಾಜ್ಯಗಳಲ್ಲಿ ಬರ ಬಂದಿದೆ. ಅದಕ್ಕೆ ಪರಿಹಾರ ನೀಡುವ ವಿಚಾರ ಪ್ರಸ್ತಾಪವೇ ಇಲ್ಲ. 2004-2014ರ ಮನಮೋಹನ್ ಸಿಂಗ್ ಕಾಲದಲ್ಲಿ 13.7% ಜಿ.ಡಿ.ಪಿ ಗ್ರೋಥ್ ಇತ್ತು. 2014 ರಿಂದ ಇಲ್ಲಿಯವರೆಗೆ ಕೇವಲ 9.6% ಗ್ರೋಥ್ ಅಷ್ಟೆ ಎಂದು ಟೀಕಿಸಿದರು.
ಮಹಾದಾಯಿ, ಮೇಕೆದಾಟು, ಆಲಮಟ್ಟಿ ಡ್ಯಾಂ ಎತ್ತರ ಮಾಡೋ ವಿಚಾರ , ಪ್ರಸ್ತಾಪ ಇಲ್ಲ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಇಡಿ ಮಣ್ಣು ಇಲ್ಲ. 2024 ಫೆಬ್ರುವರಿಗೆ ಮಡಿಕೇರಿ, ಕುಶಾಲ ಗರಕ್ಕೆ ರೈಲು ಬರುತ್ತೆ ಅಂತ ರೈಲು ಬಿಟ್ಟಿದ್ರು. ಇದ್ಯಾವುದೂ ಆಗಿಲ್ಲ. ಇದನ್ನ ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಸ್ಟೇ ಆರ್ಡರ್ ತರುತ್ತಾರೆ. ಪಕ್ಷದ ವಕ್ತಾರನ ನೇಮಕ ಮಾಡಿರೋದೇ ಮಾತಾಡೋಕೆ, ಆದರೆ ಮಾತಾಡೋದನ್ನ ನಿಲ್ಲಿಸಬೇಕು ಎಂದು ಸ್ಟೇ ತರುತ್ತಾರೆ, ಕೋರ್ಟಿನ ಮೂಲಕವೇ ಉತ್ತರ ನೀಡುತ್ತೇವೆ ಎಂದು ಎಂ.ಲಕ್ಷ್ಮಣ್ ಟಾಂಗ್ ನೀಡಿದರು.