
ಬೆಂಗಳೂರು: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಚಾಮರಾಜಪೇಟೆಯಿಂದ ಕೆಂಗೇರಿವರೆಗೆ ಸಂಚಾರ ಸುಗಮಗೊಳಿಸಲು ₹810 ಕೋಟಿ ವೆಚ್ಚದ ಭಾರೀ ಮೇಲ್ಸೇತುವೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ.
ಈ ಯೋಜನೆಯಡಿ ಸಿರಸಿ ಜಂಕ್ಷನ್ ಮೇಲ್ಸೇತುವೆಯನ್ನು ಬಿ.ಹೆಚ್.ಇ.ಎಲ್ (BHEL) ಕಿಮ್ಕೋ ಜಂಕ್ಷನ್ ವರೆಗೆ ವಿಸ್ತರಿಸಲಾಗುತ್ತದೆ. ಭೂಸ್ವಾಧೀನ ಸೇರಿ ಒಟ್ಟು ₹810 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈಗಾಗಲೇ ಸಮಗ್ರ ಯೋಜನಾ ವರದಿ (DPR) ಸಿದ್ಧವಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರದ ಮುಂದೆ ಇದೆ.
ಇದಕ್ಕೆ ಜೊತೆಗೆ ನಾಯಂಡಹಳ್ಳಿ ಮೇಲ್ಸೇತುವೆಯ ನಂತರ ರಾಜರಾಜೇಶ್ವರಿನಗರ ಕಮಾನದ ಬಳಿ ಮತ್ತೊಂದು ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ರಾಜರಾಜೇಶ್ವರಿನಗರದಿಂದ ಕೆಂಗೇರಿವರೆಗೆ ರಸ್ತೆ ಅಭಿವೃದ್ಧಿಗಾಗಿ ₹75 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಕೂಡ ನಡೆಯುತ್ತಿದ್ದು, ಇದು ಅಂತಿಮ ಹಂತದಲ್ಲಿದೆ.
ಕಳೆದ ಎರಡು ವರ್ಷಗಳಿಂದ ಈ ಭಾಗದ ಟ್ರಾಫಿಕ್ ಸಮಸ್ಯೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಯೋಜನೆ ರೂಪಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮೈಸೂರು ರಸ್ತೆಗೆ ಪರ್ಯಾಯವಾಗಿ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ, ಸದ್ಯಕ್ಕೆ ಅಂತಹ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಯೋಜನೆ ಜಾರಿಗೆ ಬಂದರೆ ಪಶ್ಚಿಮ ಬೆಂಗಳೂರಿನ ಸಾವಿರಾರು ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆಯಿಂದ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.




