ಜಿಲ್ಲೆಸುದ್ದಿ

ಯಾದಗಿರಿಯಲ್ಲಿ ಚಿನ್ನದ ಗಣಿ? ಆಕಾಶದಿಂದಲೇ ಜಿಎಸ್‌ಐ ಸರ್ಪೈಸ್ ಸರ್ವೇ!

ಯಾದಗಿರಿ: ಮಣ್ಣಿನ ಅಡಿಯಲ್ಲಿ ಬೆಲೆಬಾಳುವ ಖನಿಜಗಳ ನಿಕ್ಷೇಪವಿರುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ, ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಇಂದಿನಿಂದ ಅಧಿಕೃತ ಶೋಧ ಕಾರ್ಯಕ್ಕೆ ಚಾಲನೆ ನೀಡಿದೆ. ಜಿಲ್ಲೆಯ ಭೂಗರ್ಭದಲ್ಲಿ ಚಿನ್ನ ಸೇರಿದಂತೆ ವಿವಿಧ ಖನಿಜಗಳಿರುವ ಸಾಧ್ಯತೆಯನ್ನು ಪತ್ತೆಹಚ್ಚಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ವಿಶೇಷವಾಗಿ ಗುರುಮಠಕಲ್ ತಾಲೂಕಿನ ಕಂದಕೂರು ಮತ್ತು ಎಲ್ಹೇರಿ ಭಾಗಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದ್ದು, ಆಕಾಶದಲ್ಲಿ ನಿರಂತರವಾಗಿ ಹಾರಾಡುತ್ತಿರುವ ಹೆಲಿಕಾಪ್ಟರ್ ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಸಮೀಕ್ಷಾ ಕಾರ್ಯವು ಸಾಮಾನ್ಯ ವಿಮಾನ ಹಾರಾಟದಂತಲ್ಲದೆ, ಭೂಮಿಯ ಒಳಗಿರುವ ಖನಿಜಾಂಶಗಳನ್ನು ಗುರುತಿಸುವ ಸೆನ್ಸರ್ ಮತ್ತು ಕ್ಯಾಮೆರಾಗಳನ್ನು ಒಳಗೊಂಡಿದೆ. ಜಿಲ್ಲಾಡಳಿತದ ಅನುಮತಿಯೊಂದಿಗೆ ಇಂದಿನಿಂದ ಆರಂಭವಾಗಿರುವ ಈ ಮಿಷನ್ ಮಾರ್ಚ್ 31ರವರೆಗೆ ಮುಂದುವರಿಯಲಿದೆ. ಹೆಲಿಕಾಪ್ಟರ್ ಮೂಲಕ ನಡೆಸಲಾಗುವ ಈ ವೈಮಾನಿಕ ಸಮೀಕ್ಷೆಯು ಜಿಲ್ಲೆಯ ಆರ್ಥಿಕ ಭವಿಷ್ಯವನ್ನೇ ಬದಲಿಸುವ ನಿರೀಕ್ಷೆಯಿದೆ. ಒಂದು ವೇಳೆ ಈ ಭಾಗದಲ್ಲಿ ಚಿನ್ನದ ಅದಿರು ಪತ್ತೆಯಾದರೆ, ಯಾದಗಿರಿ ಜಿಲ್ಲೆಯು ರಾಜ್ಯದ ಪ್ರಮುಖ ಖನಿಜ ಕೇಂದ್ರವಾಗಿ ಹೊರಹೊಮ್ಮಲಿದೆ.

ಜಿಎಸ್‌ಐ ಅಧಿಕಾರಿಗಳ ತಂಡವು ಈ ಡೇಟಾವನ್ನು ವಿಶ್ಲೇಷಿಸಿ ಮುಂದಿನ ಹಂತದ ಉತ್ಖನನದ ಬಗ್ಗೆ ನಿರ್ಧರಿಸಲಿದೆ. ಸದ್ಯಕ್ಕೆ ಹೆಲಿಕಾಪ್ಟರ್ ಮೂಲಕ ನಡೆಸುತ್ತಿರುವ ಈ “ಏರಿಯಲ್ ಸರ್ವೇ” ಯಾದಗಿರಿಯ ಜನರ ಹಾದಿಹೋಕರ ಹರಟೆಯ ವಿಷಯವಾಗಿದೆ. ಗುರುಮಠಕಲ್ ಸುತ್ತಮುತ್ತಲಿನ ಭೂಮಿಯಲ್ಲಿ ನಿಜವಾಗಿಯೂ ಚಿನ್ನವಿದೆಯೇ ಅಥವಾ ಇನ್ಯಾವುದೇ ಬೆಲೆಬಾಳುವ ಲೋಹಗಳಿವೆಯೇ ಎಂಬುದು ಮಾರ್ಚ್ ಅಂತ್ಯದ ವೇಳೆಗೆ ಸ್ಪಷ್ಟವಾಗುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button