ಬೆಳಗಾವಿ: ಧರ್ಮಸ್ಥಳ ಪ್ರಕರಣದಲ್ಲಿ ಈ ಸರ್ಕಾರ ಜನರ ಜೊತೆ ಚೆಲ್ಲಾಟ ಆಡಿದೆ. ಹಾದಿ ಬೀದಿಯಲ್ಲಿ ಹೋಗುವರ ಮಾತುಗಳನ್ನ ಕೇಳಿ ಎಸ್ಐಟಿ ರಚನೆ ಮಾಡಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೆಂದ್ರ ಹೇಳಿದ್ದಾರೆ..
ಸುವರ್ಣಸೌಧದ ಬಳಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಹಿಂದೂ ಧರ್ಮದ ಭಾವನೆ ಹಾಗೂ ಧಾರ್ಮಿಕ ಭಾವನೆ ಜೊತೆಗೆ ಚೆಲ್ಲಾಟ ಆಡಿದ್ದಾರೆ.. ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗಾಂಗ್ ಬಗ್ಗೆ ಎಸ್ಐಟಿ ಕೋರ್ಟ್ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಆರು ಜನ ಷಡ್ಯಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಸೂತ್ರಧಾರಿಗಳು ಬೆರೆಯೇ ಇದ್ದಾರೆ. ಸೂತ್ರಧಾರಿಗಳು ಕೂಡ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಸುತ್ತಲೂ ಇದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.
ಇನ್ನೂ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಆರು ಜನ ಭಾಗಿಯಾಗಿದ್ದಾರೆ ಅಂತ ಗೊತ್ತಾಗಿದೆ. ಆದರೆ ಕೇವಲ ಅವರಷ್ಟೇ ಅಲ್ಲ, ಕುಮ್ಮಕು ಕೊಟ್ಟವರ ಹೆಸರು ಉಲ್ಲೇಖ ಮಾಡಿಲ್ಲ. ಅವರ ಬಗ್ಗೆಯೂ ತನಿಖೆ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ದೆಹಲಿಗೆ ಚಿನ್ನಯ್ಯನನ್ನ ಕರೆದುಕೊಂಡುಹೋಗಿ ಹೇಳಿಕೊಟ್ಟವರು, ಯೂಟ್ಯೂಬ್ ಮಂದಿಗೆ ಹಣಕಾಸಿನ ಸಹಾಯ ಮಾಡಿದವರ ಪತ್ತೆ ಮಾಡಿಲ್ಲ, ಆರು ಮಂದಿ ಎಷ್ಟು ತಪ್ಪು ಮಾಡಿದ್ದಾರೋ ಅವರಿಗೆ ಪ್ರೇರಣೆ ಮಾಡಿದವರಿಗೂ ಶಿಕ್ಷೆ ಆಗಬೇಕು.
ಕೂಡಲೇ ವಿಶೇಷ ಕೋರ್ಟ್ ರಚನೆ ಮಾಡಿ ವಿಚಾರಣೆ ನಡೆಯಬೇಕು. ಸರ್ಕಾರದ ಹಣ ವ್ಯಯ ಮಾಡಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಸರ್ಕಾರದ ಹಣವು ವೆಚ್ಚಾಗಿದೆ. ನಮ್ಮ ಹಿಂದೂ ಧರ್ಮರದ ಅಪಪ್ರಚಾರ ಮಾಡಿದ್ದಾರೆ ಅವರನ್ನ ಹೊರಗೆ ತೆಗೆಯಬೇಕು ಎಂದು ಆಗ್ರಹಿಸಿದರು.


