ನಮ್ದು ಮೋಘಲ್ ಸಂಸ್ಕೃತಿ ಅಲ್ಲ; ಸಂಜಯ್ ರಾವತ್ಗೆ ‘ಮಹಾ’ ಸಿಎಂ ಕೌಂಟರ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿ ಹಬ್ಬದ ಹಿನ್ನಲೆ ಆರ್ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ರು. ಈ ಬಗ್ಗೆ ರಾಜಕೀಯವಾಗಿ ವಿಪಕ್ಷಗಳು ಟೀಕೆ ಮಾಡುತ್ತಿವೆ. ನರೇಂದ್ರ ಮೋದಿ ಅವರಿಗೆ 75 ವರ್ಷ ವಯಸ್ಸಾಯ್ತು, ಅವರು ಟಾ..ಟಾ..ಬೈ..ಬೈ.. ಹೇಳಲು ಆರ್ಎಸ್ಎಸ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಮೋದಿ ಅವರ ಉತ್ತರಾಧಿಕಾರಿಯನ್ನು ಆರ್ಎಸ್ಎಸ್ ನಿರ್ಧಾರ ಮಾಡುತ್ತೆ ಅಂತ ಶಿವಸೇನೆ ಮುಖಂಡ ಸಂಜಯ್ ರಾವತ್ ಟೀಕಿಸಿದ್ದರು.
ಸಂಜಯ್ ರಾವತ್ ಹೇಳಿಕೆಗೆ ತಿರುಗೇಟು ಕೊಟ್ಟ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮೋದಿ ಉತ್ತರಾಧಿಕಾರಿಯನ್ನು ಹುಡುಕುವ ಪ್ರಶ್ನೆಯೇ ಇಲ್ಲ. ಮೋದಿ ನಮ್ಮ ನಾಯಕರು, ಅವರೇ ಮುಂದುವರಿಯುತ್ತಾರೆ. ಒಬ್ಬ ನಾಯಕ ಸಕ್ರಿಯನಾಗಿದ್ದಾಗ, ಅವನ ಉತ್ತರಾಧಿಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ ಸಮಾಜದಲ್ಲಿ ತಂದೆ ಜೀವಂತವಾಗಿರುವಾಗ, ನಾವು ಉತ್ತರಾಧಿಕಾರದ ಬಗ್ಗೆ ಮಾತನಾಡುವುದಿಲ್ಲ. ಇದು ಮೊಘಲ್ ಸಂಸ್ಕೃತಿ, ನಮ್ಮದಲ್ಲ. ಅದರ ಸಮಯ ಇನ್ನೂ ಬಂದಿಲ್ಲ ಎಂದು ಸಂಜಯ್ ರಾವತ್ ವಿರುದ್ಧ ಕಿಡಿಕಾರಿದ್ದಾರೆ.




