ಗದಗ: ಕರ್ನಾಟಕದ ಏಕೀಕರಣದ ರೂವಾರಿ ಸ್ವಾತಂತ್ರ್ಯ ಹೋರಾಟಗಾರ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅವೀಸ್ಮರಣಿಯ ಸ್ಮಾರಕ ನಿರ್ಮಾಣ ಮಾಡೋಣ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಅಭಿವೃದ್ಧಿ ಪಡಿಸುವ ಸಭೆಯ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿದರು. ದಿ.ಅಂದಾನೆಪ್ಪ ದೊಡ್ಡಮೇಟಿ ಅವರು ಕರ್ನಾಟಕ ಏಕೀಕರಣಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಅವರ ಜೀವನದುದ್ದಕ್ಕೂ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮೂಲಕ ಹೆಸರುವಾಸಿ ಆಗಿದ್ದಾರೆ.
ಮಹಾತ್ಮಾ ಗಾಂಧೀಜಿಯವರು ಗದಗಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಜಕ್ಕಲಿಗೆ ಕರೆದೊಯ್ದಿದ್ದಾರೆ. ಹಾಗೂ ಮಾಜಿ ಪ್ರಧಾನಿ ದಿ. ಜವಹಾರಲಾಲ ನೆಹರು ಅವರೊಂದಿಗೂ ಸಹ ಒಡನಾಟ ಹೊಂದಿದ್ದರು. ಅವರ ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು ಇದೊಂದು ಪ್ರವಾಸಿ ತಾಣವಾಗಿ ಹೊರಹೊಮ್ಮಲಿ ಎಂಬ ಸದಾಶಯ ಹೊಂದಿದ್ದೇವೆ ಎಂದರು.

ಪ್ರಥಮ ಹಂತದಲ್ಲಿ ಅಂದಾನೆಪ್ಪ ದೊಡ್ಡಮೇಟಿ ಅವರ ಪುತ್ಥಳಿ, ಉತ್ತಮ ಗ್ರಂಥಾಲಯ, ಉದ್ಯಾನವನ, ಸಾಂಸ್ಕೃತಿಕ ಭವನ ಹಾಗೂ ಅಪರೂಪದ ಛಾಯಾಚಿತ್ರಗಳ ಪ್ರದರ್ಶನಗಳ ಸಂಗ್ರಹ ಮಾಡಿ ಅವುಗಳನ್ನು ಜನಸಾಮಾನ್ಯರಿಗೆ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಉತ್ತಮವಾದ 3-4 ಪರಿಕಲ್ಪನೆಗಳನ್ನು ರೂಪಿಸಿ ಅದಕ್ಕೆ ಪರಿಣಿತ ಆರ್ಕಿಟೆಕ ರಿಂದ ನೀಲನಕ್ಷೆ ಶೀಘ್ರವೇ ರೂಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಅವರು ಸೂಚಿಸಿದರು.