#Exclusive NewsTop Newsಸುದ್ದಿ

ಕಾವೇರಿ ನಿಗಮದ ಎಂಡಿ ಮಹೇಶ್ ಮನೆ ಮೇಲೆ ಲೋಕಾ ದಾಳಿ: ಅಕ್ರಮದ ಮಹತ್ವದ ದಾಖಲೆಗಳು ಪತ್ತೆ

ಕಾವೇರಿ ನಿಗಮದ ಎಂಡಿ ಮಹೇಶ್ ಮೇಲೆ ಲೋಕಾಯುಕ್ತರ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಕಳೆದ ವರ್ಷದಿಂದ ನಿಗಮದ ಎಂಡಿ ಆಗಿದ್ದ ಮಹೇಶ್ ತಮ್ಮ ದುರ್ವರ್ತನೆಗಳಿಂದ ಹಾಗೂ ಲಂಚಾವತಾರದಿಂದ ಕುಖ್ಯಾತಿ ಪಡೆದಿದ್ದರು. ಮಹೇಶ್ ಲಂಚಾವತಾರದ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು.

ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಎಂಡಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ವಿರುದ್ಧ ಹಲವು ದೂರು ಬಂದ ಹಿನ್ನೆಲೆ ಮಂಡ್ಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 9 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ.

ಮಂಡ್ಯದ ಕೆಆರ್ಎಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಮಳವಳ್ಳಿಯ ದಳವಾಯಿ ಕೋಡಿಹಳ್ಳಿ ನಿವಾಸದಲ್ಲೂ ಅಧಿಕಾರಿಗಳ ತಂಡ ತಲಾಷ್ ನಡೆಸುತ್ತಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದ್ದು, ಬೆಳಗ್ಗೆಯಿಂದ ಲೋಕಾಯುಕ್ತ ಪೊಲೀಸರು ಅಕ್ರಮಕ್ಕೆ ಸಂಬಂಧಿಸಿದ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ದೂರಿನನ್ವಯ ಮಹೇಶ್ ಮನೆ, ಸಂಬಂಧಿಕರ ಮನೆಗಳ ಮೇಲೆ ಹಾಗೂ ದಳವಾಯಿ ಕೋಡಿಹಳ್ಳಿಯಲ್ಲಿರುವ ಮಹೇಶ್ ಅವರ ಅತ್ತೆ ನಿವಾಸಗಳ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳು ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌‍ ಸಮೀಪದ ಪಂಪ್‌ ಹೌಸ್‌‍, ಮಹೇಶ್‌ ಅವರ ಪತ್ನಿ ಹೆಸರಲ್ಲಿರುವ ನಮ್ರತಾ ಪೆಟ್ರೋಲ್‌ ಬಂಕ್‌ ಮೇಲೆಯೂ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಜಾಲಾಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button