ಬೆಂಗಳೂರು: RSS ಪಥ ಸಂಚಲನ ಮಾಡೇ ಮಾಡುತ್ತೇವೆ ಎಂಬ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.. ಕಲ್ಲಡ್ಕ ಪ್ರಭಾಕರ್ ಭಟ್ ಆಗಲಿ, ಅವರ ಅಪ್ಪ ಆಗಲಿ ಕಾನೂನು ಎಲ್ಲರಿಗೂ ಒಂದೇ. ಕಲ್ಲಡ್ಕ ಪ್ರಭಾಕರ್ ಭಟ್ ಯಾರು. ಕೋರ್ಟ್ಗಿಂತ ಅವರು ದೊಡ್ಡವರಾ. ಕೋರ್ಟ್ ಅನುಮತಿ ಸಿಗದೇ ಮಾಡುತ್ತಾರಾ? ಅನುಮತಿ ಇಲ್ಲದೇ ಮಾಡಿದರೆ ಸರ್ಕಾರ ಕತ್ತೆ ಕಾಯುತ್ತಿರುತ್ತಾ? ಅನುಮತಿ ತಗೆದುಕೊಳ್ಳಲೇ ಬೇಕು ಎಂದು ವಾಗ್ದಾಳಿ ನಡೆಸಿದರು.
ಬಹಿರಂಗ ಚರ್ಚೆಗೆ ಬನ್ನಿ ಎಂದರೂ ಚರ್ಚೆಗೆ ಬರಲ್ಲ. ಏನಾದ್ರೂ ಕಂಟೆಂಟ್ ಇದ್ರೆ ಬರುತ್ತಿದ್ದರು. ಬರೀ ವೈಯಕ್ತಿಕವಾಗಿ ಮಾತನಾಡುತ್ತಾರೆ. ಆರ್ಎಸ್ಎಸ್ ರಿಜಿಸ್ಟರ್ ಆಗಿದ್ಯಾ ಎಂದು ಕೇಳಿದ್ರೆ ತಪ್ಪಾ. ದಾಖಲೆ ತಂದು ಮುಖದ ಮೇಲೆ ಬಿಸಾಕಲಿ. ಇವರಿಗೆ ಎಲ್ಲಿಂದ ದೇಣಿಗೆ ಸಿಗುತ್ತಿದೆ? ದೇವಸ್ಥಾನದ ಹುಂಡಿ ಲಾಕ್ ಆಗಿರುತ್ತೆ. ಅದನ್ನ ತೆಗೆಯಬೇಕಾದರೆ ತಹಶೀಲ್ದಾರ್ ಬರಬೇಕು, ಎಲ್ಲವನ್ನೂ ಪಾರದರ್ಶಕವಾಗಿ ತೆಗೆಯುತ್ತಾರೆ. ಆದರೆ ಆರ್ಎಸ್ಎಸ್ಗೆ ಎಲ್ಲಿಂದ ದೇಣಿಗೆ ಬರುತ್ತಿದೆ. ದೇಣಿಗೆ ಮೂಲ ಗೊತ್ತಾಗಬೇಕಲ್ವಾ? ರಾಜ್ಯ, ದೇಶ, ವಿದೇಶದಿಂದ ಬರುತ್ತಿದ್ಯಾ? ಇದರ ಮೂಲ ಗೊತ್ತಾಗಬೇಕಲ್ವಾ? ದೇಶದ ದೊಡ್ಡ ಎನ್ಜಿಓ ಅಂತ ಮೋದಿ ಹೇಳ್ತಾರಲ್ವಾ? ಅದರ ಲೆಕ್ಕವನ್ನು ಕೊಡಲಿ ಈಗ. ಸರ್ದಾರ್ ವಲ್ಲಬಾಯ್ ಪಟೇಲ್ರಿಂದ ಹಿಡಿದು ಇಂದಿರಾಗಾಂಧಿವರೆಗೆ ನಾವು ದೊಡ್ಡ ಮನಸ್ಸು ಮಾಡಿಕೊಂಡು ಬಂದಿದ್ದೇವೆ, ಅದೇ ತಪ್ಪಾಗಿದೆ ಎಂದು ಹರಿಹಾಯ್ದರು.
ಆರ್ಎಸ್ಎಸ್ ಹೊಗಳೋದು ಬಿಜೆಪಿಯಲ್ಲಿ ಇರುವವರಿಗೆ ಅನಿವಾರ್ಯ. ಬಸವರಾಜ ಬೊಮ್ಮಾಯಿ ಸಾಹೇಬ್ರು ಎಲ್ಲ ಜ್ಞಾನ ಇರುವ ಮನುಷ್ಯ, ಕಾನೂನಿನ ಅರಿವು ಅವರಿಗೆ ತುಂಬಾ ಚೆನ್ನಾಗಿಯೇ ಇದೆ. ಸುಪ್ರೀಂ ಕೋರ್ಟ್ ತನಕ ಬೊಮ್ಮಾಯಿಯವರ ತಂದೆ ಹೋರಾಟ ಮಾಡಿದ್ರು. ಅದೇ ಜಡ್ಜ್ಮೆಂಟ್ ನೋಡಿಬಿಟ್ಟರೆ ಬೊಮ್ಮಾಯಿಯವರು ಬಿಜೆಪಿ ಬಿಟ್ಟು ಹೊರಗೆ ಬರುತ್ತಾರೆ. ಭಾರತೀಯ ಸಂಸ್ಕೃತಿಯ ವಾರಸುದಾರರ ಸಂಸ್ಕೃತಿ ಹೇಗಿದೆ ನೋಡಿ ಇವರ ಸಂಸ್ಕೃತಿ ಇದು. ಇವರೆಲ್ಲ ನಡೆಯಲಾರದ ನಾಣ್ಯಗಳು, ಇವರನ್ನು ಮುಂದೆ ಬಿಟ್ಟು ನಮ್ಮನ್ನು ಟೀಕೆ ಮಾಡಿಸುತ್ತಾರೆ. ಇವರಿಗೆ ಹೇಳುವುದಕ್ಕೆ ಬೇರೆ ವಿಷಯಗಳಿಲ್ಲ. ಅದಕ್ಕೆ ನಮ್ಮ ಬಣ್ಣ ನಮ್ಮ ಹೇರ್ ಲಾಸ್ ಇದರ ಬಗ್ಗೆಯೇ ಮಾತನಾಡುತ್ತಾರೆ ಎಂದರು.
ಆರ್ಎಸ್ಎಸ್ ದೇವರಿಗಿಂತ ದೊಡ್ಡವರಾಗಿಬಿಟ್ಟಿದೆಯಾ? ಆರ್ಎಸ್ಎಸ್ಗೆ ದೇಣಿಗೆ ಕೊಡುವವರು ಯಾರು ಎಂಬುದು ಮಾಹಿತಿ ಬೇಕು. ಇವರಿಗೆ ಎಲ್ಲಿಂದ ದೇಣಿಗೆ ಬರುತ್ತಿದೆ? ಹೊರ ರಾಜ್ಯ ಹೊರದೇಶದಿಂದ ಬರುತ್ತಿದೆಯಾ? ಮಾಹಿತಿ ಕೊಡಿ. ಒಂದು ದೇವಸ್ಥಾನದ ಹುಂಡಿ ಹಣಕ್ಕೂ ಲೆಕ್ಕ ಇರುತ್ತದೆ. ಹುಂಡಿಗೆ ಎಷ್ಟು ಹಣ ಬಿದ್ದಿದೆ ಎಂಬುದನ್ನು ಎಣಿಸಿ ಲೆಕ್ಕ ಇಡುತ್ತಾರೆ. ಅದನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸುತ್ತಾರೆ. ಹಾಗಾದರೆ ಆರ್ಎಸ್ಎಸ್ ದೇವಸ್ಥಾನ ದೇವರಿಗಿಂತ ದೊಡ್ಡವರಾಗಿಬಿಟ್ಟರಾ ಎಂದು ಕೆಂಡಕಾರಿದರು.
ನನ್ನ ಮಾತಲ್ಲಿ ಹಿಂದೆ ಒಂದು, ಮುಂದೆ ಒಂದು ಇಲ್ಲ. ನಾನು ಸಾರ್ವಜನಿಕವಾಗಿ ಏನು ಮಾತನಾಡುತ್ತೇನೋ ಖಾಸಗಿಯಾಗಿಯೂ ಅದನ್ನೇ ಮಾತನಾಡುತ್ತೇನೆ. ನಾನು ಯಾರ ಮೇಲೂ ಪ್ರಭಾವ ಬೀರುತ್ತಿಲ್ಲ. 11 ಸಂಘಟನೆಗಳು ಚಿತ್ತಾಪುರದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೋರಿವೆ. ಅದಕ್ಕೆ ಶಾಂತಿ ಸಭೆ ಅಧಿಕಾರಿಗಳು ಮಾಡುತ್ತಾರೆ. ಅಧಿಕಾರಿಗಳೇ ತೀರ್ಮಾನ ಮಾಡಿ ಕೋರ್ಟ್ಗೆ ಸಲ್ಲಿಕೆ ಮಾಡುತ್ತಾರೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನೇ ನಾವೂ ಪಾಲನೆ ಮಾಡುತ್ತೇವೆ ಎಂದು ಹೇಳಿದರು.


