ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಉಪ ಪ್ರಧಾನಿಗಳಾಗಿದ್ದ ಎಲ್.ಕೆ.ಅಡ್ವಾಣಿಜೀ ಅವರು ಮೂಲಕಾರಣ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ತಮ್ಮ ಧವಳಗಿರಿ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಡವನ್ನು ಕೆಡಹುವ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿ ಅವರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು ಎಂದು ನೆನಪು ಮಾಡಿಕೊಂಡರು.
ಅನೇಕ ಸಂದರ್ಭಗಳಲ್ಲಿ ರಥಯಾತ್ರೆಯಲ್ಲೂ ನಾನು ಭಾಗವಹಿಸಿದ್ದೆ. ಇದೆಲ್ಲದರ ಪರಿಣಾಮ ಇವತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತೀರ್ಮಾನಕ್ಕೆ ಇಡೀ ದೇಶ, ವಿದೇಶಗಳಲ್ಲಿ ಎಲ್ಲರೂ ಸಂತೋಷ, ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕರಸೇವಕರಾಗಿ ಅವರು ಆರಂಭಿಸಿದ್ದ ರಥಯಾತ್ರೆ ಕೋಟ್ಯಂತರ ಭಾರತೀಯರಿಗೆ ಹಾಗೂ ವಿಶ್ವದಾದ್ಯಂತ ಇರುವ ಹಿಂದೂಗಳ ಆರಾಧ್ಯ ದೈವ ಬಾಲಕ ರಾಮ ಇವತ್ತು ಅಯೋಧ್ಯೆಯಲ್ಲಿ ವಿರಾಜಮಾನರಾಗಿದ್ದಾರೆ. ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಸೇರಿ ಅನೇಕ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಅವರು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.