
ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯದ ಸಾಲ ಹಾಗೂ ಕೇಂದ್ರದ ಸಾಲದ ಬಗ್ಗೆ ವಿವರಣೆ ನೀಡಿದ ಸಿಎಂ, ನಾವು ಸಾಲ ಮಾಡಿದ್ದೀವಿ, ಇಲ್ಲ ಅಂತ ಹೇಳೋದಿಲ್ಲ. 8,24,369 ಕೋಟಿ ರೂ. ಸಾಲ ಮಾಡಿದ್ದೇವೆ. ನಾವೆಷ್ಟು ಸಾಲ ಮಾಡಿದ್ದೇವೆ, ನೀವೆಷ್ಟು ಮಾಡಿದ್ರಿ ಎಲ್ಲ ಹೇಳುತ್ತೇನೆ. ಕೇಂದ್ರ ಸರ್ಕಾರ ಎಷ್ಟು ಸಾಲ ಮಾಡಿದೆ ಗೊತ್ತಾ? ಅದನ್ನೆಲ್ಲ ನೀವು ತಿಳಿದುಕೊಳ್ಳಬೇಕು. 2014ರಲ್ಲಿ ಕೇಂದ್ರದ ಸಾಲ 53.11 ಲಕ್ಷ ಕೋಟಿ ರೂ. ಇತ್ತು. ಈಗ 2026-27ರಲ್ಲಿ 218 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ.
ಮೋದಿ ಪಿಎಂ ಆದ ಬಳಿಕ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಸಾಲ ಮಾಡಿಲ್ವಾ? ಭಾರತ ಸಾಲದ ದೇಶ ಅಲ್ವಾ? ಕೇಂದ್ರ ಈ ವರ್ಷ 16.96 ಲಕ್ಷ ಕೋಟಿ ಸಾಲ ಮಾಡಿದ್ರೆ, ನಾವು 1.32 ಲಕ್ಷ ಕೋಟಿ ಮಾಡಿದ್ದೇವೆ. ಇದನ್ನೆಲ್ಲ ನಿಮಗೆ ಹೇಳಿಕೊಟ್ಟಿಲ್ಲ ಅನಿಸುತ್ತೆ ಎಂದು ವಿಪಕ್ಷದವರ ಕಾಲೆಳೆದರು.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದಿದ್ದರು. ನಾಲ್ಕು ಬಜೆಟ್ನಲ್ಲೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇದು ಅನ್ಯಾಯ ಅಲ್ಲವಾ? ಇದನ್ನು ಕೇಳ್ಬೇಕಾ, ಬೇಡ್ವಾ? ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಬಜೆಟ್ ಮಂಡಿಸಿದ್ದರು. ಅವರೇ ಕೇಂದ್ರದಿಂದ ಅನುದಾನ ಬರುತ್ತದೆ ಎಂದಿದ್ದರು. ನ್ಯಾಷನಲ್ ಪ್ರಾಜೆಕ್ಟ್ ಮಾಡ್ತೀನಿ ಅಂದಿದ್ರು. ಆದರೆ ಇವತ್ತಿನವರೆಗೂ ಒಂದು ರೂಪಾಯಿ ಬಂದಿಲ್ಲ. ಇದು ಅನ್ಯಾಯ ಅಲ್ಲವಾ? ರಾಜ್ಯಕ್ಕೆ ಮಾಡಿರುವ ದೊಡ್ಡ ದ್ರೋಹ ಅಲ್ಲವಾ? ನನ್ನ ಪ್ರಕಾರ ಬಿಜೆಪಿಯವರು ಕೂಡ ಕೇಳಬೇಕು. 11,495 ಕೋಟಿ ವಿಶೇಷ ಅನುದಾನ ಕೊಡಬೇಕು, ಅದನ್ನು ಕೇಳಬೇಕು.




