
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆಯ ಪ್ರಕರಣದಲ್ಲಿ, ಪಿಸ್ತೂಲಿನಿಂದ ಶೂಟ್ ಮಾಡಿಕೊಂಡರೂ ಕಚೇರಿಯ ಸಿಬ್ಬಂದಿಗೆ ಶಬ್ದ ಕೇಳಿಸದಿರಲು ಕಾರಣವೇನು ಎಂಬ ಹೊಸ ಪ್ರಶ್ನೆ ಮೂಡಿದೆ.
ಬೆಂಗಳೂರಿನ ರಿಚ್ಮಂಡ್ ಸರ್ಕಲ್ನಲ್ಲಿರುವ ಕಚೇರಿಯ ಚೇಂಬರ್ ಸಂಪೂರ್ಣವಾಗಿ ಸೌಂಡ್ ಪ್ರೂಫ್ ಆಗಿತ್ತು. ರಾಯ್ ಅವರು ತಮ್ಮ ವೈಯಕ್ತಿಕ ಚರ್ಚೆಗಳು ಅಥವಾ ವ್ಯವಹಾರದ ಮಾತುಕತೆಗಳು ಹೊರಗೆ ಕೇಳಿಸಬಾರದು ಎಂಬ ಉದ್ದೇಶದಿಂದ ಇಂಟೀರಿಯರ್ ಮಾಡಿಸುವಾಗಲೇ ಶಬ್ದ ನಿಯಂತ್ರಕ ವ್ಯವಸ್ಥೆಯನ್ನು ಅಳವಡಿಸಿದ್ದರು. ಇದೇ ಕಾರಣಕ್ಕೆ ಗುಂಡು ಹಾರಿದ ಭಾರಿ ಶಬ್ದ ಕೂಡ ಹೊರಗಿದ್ದವರಿಗೆ ಕೇಳಿಸಲಿಲ್ಲ, ಇದರಿಂದಾಗಿ ಘಟನೆ ನಡೆದು 20 ನಿಮಿಷಗಳ ಕಾಲ ಯಾರಿಗೂ ಸುಳಿವೇ ಸಿಗಲಿಲ್ಲ ಎಂದು ಹೇಳಲಾಗ್ತಿದೆ.
ಘಟನೆ ನಡೆದ ದಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹೇಳಿಕೆ ನೀಡಿ ಕಚೇರಿಗೆ ಮರಳಿದ್ದ ರಾಯ್ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದಂತೆ ಕಂಡುಬಂದಿದ್ದರು. ಕಚೇರಿಗೆ ಬಂದ ತಕ್ಷಣ ತಮ್ಮ ತಾಯಿಯೊಂದಿಗೆ ಮಾತನಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿ ತಮ್ಮ ಕೊಠಡಿಗೆ ತೆರಳಿದ್ದರು. ಈ ವೇಳೆ ಯಾರನ್ನೂ ಒಳಗೆ ಬಿಡದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು. ಬಹಳ ಹೊತ್ತಾದರೂ ಅವರು ಹೊರಗೆ ಬಾರದೇ ಇದ್ದಾಗ ಮತ್ತು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಮತ್ತು ಭದ್ರತಾ ಸಿಬ್ಬಂದಿ ಬಾಗಿಲು ಒಡೆದು ಒಳಪ್ರವೇಶಿಸಿದರು. ಆಗ ರಾಯ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಇಂತಹ ಪ್ರಭಾವಿ ಉದ್ಯಮಿ ಐಟಿ ದಾಳಿಯ ನಂತರದ ಬೆಳವಣಿಗೆಗಳಿಂದ ಮನನೊಂದು ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಉದ್ಯಮ ವಲಯದಲ್ಲಿ ತಲ್ಲಣ ಮೂಡಿಸಿದೆ.




