#Exclusive NewsTop Newsರಾಜ್ಯಸುದ್ದಿ

ಗುಲಾಬ್‌ ಜಾಮೂನ್‌ನಿಂದ ವರ್ತೂರು ಪ್ರಕಾಶ್‌ಗೆ ಬಂಧನ ಭೀತಿ….!

ವರ್ತೂರು ಪ್ರಕಾಶ್‌ಗೆ ತನ್ನ ಫೇಸ್‌ಬುಕ್‌ ಗೆಳತಿಯಿಂದಲೇ ಬಂಧನ ಭೀತಿ ಎದುರಾಗಿದೆ. ವಂಚಕಿ ಶ್ವೇತಾ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಶ್ವೇತಾಗೌಡ ಹಾಗೂ ವರ್ತೂರು ಪ್ರಕಾಶ್‌ಗೆ ನಿಕಟ ನಂಟಿರುವುದು ಪತ್ತೆಯಾಗಿದೆ. ಇಬ್ಬರೂ ಹಲವು ಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ಅಲ್ಲದೇ ತಿರುಪತಿಗೆ ಹೋಗಲು ಸಹ ಟಿಕೆಟ್‌ ಬುಕ್‌ ಮಾಡಿರುವುದು ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಶ್ವೇತಾ ಮೊಬೈಲ್‌ನಲ್ಲಿ ಹಲವು ಫೋಟೋ ಸಾಕ್ಷ್ಯಗಳು ಸಿಕ್ಕಿವೆ. 3 ಚಿನ್ನದ ಅಂಗಡಿ ಮಾಲೀಕರ ಜ್ಯುವೆಲ್ಲರಿ ಶಾಪ್‌ಗೆ ಶ್ವೇತಾ ಜೊತೆ ವರ್ತೂರು ಪ್ರಕಾಶ್ ಹೋಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಎರಡು ಬಾರಿ ನೋಟಿಸ್‌ ನೀಡಿದ್ದರೂ ವರ್ತೂರು ಪ್ರಕಾಶ್‌ ವಿಚಾರಣೆಗೆ ಹಾಜರಾಗದ ಕಾರಣ ಮೂರನೇ ನೋಟಿಸ್‌ ನೀಡಲಾಗಿದೆ. ವಿಚಾರಣೆಗೆ ಹಾಜರಾಗದಿದ್ದರೆ, ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಗುಲಾಬ್‌ ಜಾಮೂನ್‌ ಅಂತ ನಂಬರ್‌ ಸೇವ್‌:

6 ತಿಂಗಳ ಹಿಂದೆಯಷ್ಟೇ ಶ್ವೇತಾ, ವರ್ತೂರು ಪ್ರಕಾಶ್‌ಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು, ತಾನೇ ರಿಕ್ವೆಸ್ಟ್‌ ಕಳಿಸಿ ಸ್ನೇಹದ ಬಲೆಗೆ ಬೀಳಿಸಿಕೊಂಡಿದ್ದಳು. ಬಳಿಕ ಮೆಸೆಂಜರ್‌ನಲ್ಲಿ ಚಾಟಿಂಗ್‌ ಶುರುವಾಗಿ ಇಬ್ಬರೂ ಮೊಬೈಲ್‌ನಂಬರ್‌ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ವಾಟ್ಸಪ್‌ನಲ್ಲೂ ಚಾಟಿಂಗ್‌ ಮುಂದುವರಿದಿದೆ. ಶ್ವೇತಾ ವರ್ತೂರು ಪ್ರಕಾಶ್‌ ನಂಬರ್‌ ಅನ್ನು ಗುಲಾಬ್‌ ಜಾಮೂನ್‌ ಎಂಬ ಹೆಸರಿನಿಂದ ಸೇವ್‌ ಮಾಡಿಕೊಂಡಿದ್ದಳು ಅನ್ನೋ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆತ್ಮೀಯತೆ ಮುಂದುವರಿದ ನಂತರ ಶ್ವೇತಾ ಬಳಿಯೇ ವರ್ತೂರು ಪ್ರಕಾಶ್‌ 10 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ ಅನ್ನೋ ಆರೋಪವೂ ಶ್ವೇತಾಳಿಂದ ಕೇಳಿಬಂದಿದೆ. ಮೂರು ಬ್ರೇಸ್ಲೆಟ್‌, ಒಂದು ಉಂಗುರ ಸೇರಿ, ಬ್ಯಾಂಕ್‌ ಖಾತೆಗೆ 10 ಲಕ್ಷ ರೂ. ಹಾಕಿಸಿಕೊಂಡಿದ್ದರಂತೆ, ತಿರುಪತಿಗೆ ಹೋಗಲು ಶ್ವೇತಾ ಜೊತೆ ಟಿಕೆಟ್‌ ಕೂಡ ಬುಕ್‌ ಮಾಡಿದ್ದರಂತೆ, ಟಿಕೆಟ್‌ ಬುಕ್‌ ಮಾಡಿದ್ದ ಫೋಟೋ ಸಹ ಲಭ್ಯವಾಗಿದೆ. ಹೀಗೆ ಇಬ್ಬರೂ ಸೇರಿ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಬಹಿರಂಗವಾಗಿದೆ.

Comments (0)

Your email address will not be published. Required fields are marked *

Back to top button