ರಾಜಕೀಯಸುದ್ದಿ

ಧಾರವಾಡದಲ್ಲಿ ಐಟಿ ದಾಳಿ: ಒಂದೇ ಫ್ಲ್ಯಾಟ್​ನಲ್ಲಿ ಬರೋಬ್ಬರಿ 18 ಕೋಟಿ ಹಣ ಜಪ್ತಿ

ಧಾರವಾಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟದ ಮೇಲೆ ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಎಲ್ಲೆಡೆ ಜಾಲಾಡುತ್ತಿದ್ದಾರೆ. ಮಂಗಳವಾರ ಧಾರವಾಡದಲ್ಲಿ ದಾಳಿ ನಡೆಸಿದ್ದು, ಫ್ಲ್ಯಾಟ್ ಒಂದರಲ್ಲಿ ಸಂಗ್ರಹಿಸಲಾಗಿದ್ದ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ.

ನಗರದ ನಾರಾಯಣಪುರ ಮುಖ್ಯ ರಸ್ತೆಯ ದಾಸನಕೊಪ್ಪ ಕ್ರಾಸ್‌ ಬಳಿಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿರುವ ಮನೆಯೊಂದರ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಚೀಲಗಳಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ. ಸುಮಾರು ರೂ. 18 ಕೋಟಿ ಹಣ ಇದೆ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳು ಎಣಿಕೆ ಕಾರ್ಯ ನಡೆಸುತ್ತಿದ್ದಾರೆ. ಎಣಿಕೆ ಪೂರ್ಣಗೊಂಡ ಬಳಿಕವೇ ನಿಖರ ಮಾಹಿತಿ ಸಿಗಲಿದೆ.

ಮನೆಯಲ್ಲಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಮನೆಗೆ ತೆರಳಿ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಸುಮಾರು 6 ವಾಹನಗಳಲ್ಲಿ ಬಂದ 20ಕ್ಕೂ ಅಧಿಕಾರಿಗಳು ದಾಳಿ ಮಾಡಿದ್ದು, ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ 10ರ ನಂತರವೂ ಪರಿಶೀಲನೆ, ಎಣಿಕೆ ಪ್ರಕ್ರಿಯೆ ನಡೆಯಿತು.

ಮೊನ್ನೆ ಅಷ್ಟೇ ಐಟಿ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂ. ಗೂ ಹೆಚ್ಚು ನಗದು ಸಿಕ್ಕಿತ್ತು. ನಿಂಗಪ್ಪ ಜಟಾದ್ ಎಂಬುವವರ ಮನೆಯಲ್ಲಿ ಪತ್ತೆಯಾಗಿದ್ದ 2 ಕೋಟಿ ರೂ. ಹೆಚ್ಚು ನಗದು ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.

Comments (0)

Your email address will not be published. Required fields are marked *

Back to top button