bengaluruರಾಜ್ಯಸುದ್ದಿ

ಪೀಣ್ಯ ಫ್ಲೈಓವರ್ ಬಂದ್ ಇಲ್ಲ: ಎಂದಿನಂತೆ ವಾಹನ ಸಂಚಾರಕ್ಕೆ ಮುಕ್ತ!

ಬೆಂಗಳೂರು:  ನಾಳೆಯಿಂದ ಅಂದರೆ ಏಪ್ರಿಲ್​ 13ರಿಂದ 5 ದಿನ ಬಂದ್​ ಆಗಲಿದೆ ಎನ್ನಲಾಗಿದ್ದ ಪೀಣ್ಯ ಫ್ಲೈಓವರ್ )​​ ಸದ್ಯ ನಾಳೆಯಿಂದ ಎಂದಿನಂತೆ ವಾಹನ ಸಂಚಾರಕ್ಕೆ ತೆರೆಯಲಾಗಿದೆ. ಕಾರಣಾಂತರಗಳಿಂದ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಲೋಡ್ ಟೆಸ್ಟಿಂಗ್​​ ಪ್ರಕ್ರಿಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದೂಡಿದೆ. ಹೀಗಾಗಿ ನಾಳೆಯಿಂದ ಫ್ಲೈಓವರ್ ಬಂದ್ ಮಾಡುತ್ತಿಲ್ಲ. ವಾಹನ ಸಂಚಾರ ಇರಲಿದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಸಂಚಾರ ವಿಭಾಗ ಪೊಲೀಸರು ಟ್ವೀಟ್ ಮಾಡಿದ್ದು, ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಫೈಓವರ್​ನಲ್ಲಿನ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಅವುಗಳ ಸಮಗ್ರತೆಯ ಪರಿಶೀಲನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಿಮ ಲೋಡ್ ಟೆಸ್ಟಿಂಗ್​​ ಪ್ರಕ್ರಿಯೆ ನಡೆಸಲು ಮುಂದಾಗಿತ್ತು.

ಈ ಸಂಬಂಧ ಏಪ್ರಿಲ್​ 13ರಂದು ಬೆಳಿಗ್ಗೆ 05:00 ಗಂಟೆಯಿಂದ ಏಪ್ರಿಲ್​ 17ರಂದು ಬೆಳಿಗ್ಗೆ 11 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫೈಓವ‌ರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವುದಾಗಿ ಹೇಳಲಾಗಿತ್ತು. ಆದರೆ ಸದ್ಯ ಕಾರಣಾಂತರಗಳಿಂದ ಉದ್ದೇಶಿತ ಅಂತಿಮ ಲೋಡ್ ಟೆಸ್ಟಿಂಗ್​ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹೀಗಾಗಿ ಮೇಲ್ವೇತುವೆಯು ಎಂದಿನಂತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗ ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಮಂಡ್ಯಗೆ ಭೇಟಿ ನೀಡಲಿದ್ದಾರೆ. ಅವರು ಆದಿಚುಂಚನಗಿರಿ ಮಠದ ಭೈರವೈಕ್ಯ ಮಂದಿರ ಉದ್ಘಾಟನೆಗಾಗಿ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೀಣ್ಯ ಪೊಲೀಸ್ ಠಾಣೆ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಏಪ್ರಿಲ್ 11ರಿಂದ ಏಪ್ರಿಲ್ 14ರ ವರೆಗೆ ಸರ್ಕಾರಿ ಮತ್ತು ಶಾಲೆಗಳಿಗೆ ರಜೆ ಇದೆ. ಈ ಸಮಯದಲ್ಲಿ ಫ್ಲೈಓವರ್ ಬಂದ್​ ಮಾಡಿದರೆ,​ಪ್ರತಿ ಗಂಟೆಗೆ ಸುಮಾರು 4 ಸಾವಿರದಿಂದ 5 ಸಾವಿರ ವಾಹನಗಳು ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಹಾಗೂ 8ನೇ ಮೈಲಿಯಲ್ಲಿ ಸಂಚಾರ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಗುವುದಷ್ಟೇ  ಅಲ್ಲ, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Comments (0)

Your email address will not be published. Required fields are marked *

Back to top button