BELAGAVI

ರೂ.4,500 ಕೋಟಿ ಮಹಾ ವಂಚನೆ – ಶಿವಾನಂದ ನೀಲಣ್ಣನವರ್ ಬಂಧನ!

Illegal Fund collection by Shivananda Neelannanavar in Belagavi

ಬೆಳಗಾವಿ: ಶಿವಾನಂದ ನೀಲಣ್ಣನವರ್ (Shivananda Neelannavar) ಮಾಲೀಕತ್ವದ ಶಿವಂ ಅಸೋಸಿಯೇಟ್ (Shivam Associates) ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಾರ್ವಜನಿಕರು ಮತ್ತು ಮಾಜಿ ಸೈನಿಕರ ಹೂಡಿಕೆ ಹಣ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮುನ್ಸೂಚನೆ ಮೇರೆಗೆ ದಾಳಿ ನಡೆಸಲಾಗಿದ್ದು, ಸತತ ಎಂಟು ಗಂಟೆಗಳಿಂದ ದಾಖಲೆಗಳ ಪರಿಶೀಲನೆಯ ನಂತರ ಮಾಲೀಕ ಶಿವಾನಂದ ನೀಲಣ್ಣನವರ್ ಬಂಧನವಾಗಿದೆ.

ಉಪವಿಭಾಗಾಧಿಕಾರಿ ಶ್ರವಣಕುಮಾರ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ವೇಳೆ ಅಧಿಕಾರಿಗಳು ತಬ್ಬಿಬ್ಬಾದ್ದು, ರೂ. 4500 ಕೋಟಿ ಹಣ ವಂಚನೆಯಾಗಿರುವ ಶಂಕೆ ವ್ಯಕ್ತವಾಗಿತ್ತು.ಈ ಬೆನ್ನಲ್ಲೇ ಮಾಳಮಾರುತಿ ಪೊಲೀಸರು ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ಪಂಚನಾಮೆ ಪ್ರಾರಂಭಿಸಿ ಆರೋಪಿ ಶಿವಾನಂದ ನೀಲಣ್ಣನವರ್ ನನ್ನು ಬಂಧಿಸಿ ಶಿವಬಸವ ನಗರದ ಕಚೇರಿ ಗೆ ಕರೆದುಕೊಂಡು ಬಂದರು.

ನೆಕ್ಸ್ಟ್ ಎಲೆಕ್ಷನ್ ನಾನೇ ಸಿಎಂ!

“ಮುಂದಿನ ಚುನಾವಣೆಯಲ್ಲಿ ಒಂದೇ ಬಾರಿಗೆ 224 ಸ್ಥಾನ ಗೆದ್ದು ನಾನೇ ಸಿಎಂ ಆಗ್ತೀನಿ” ಎಂದು ಬೀಗುತ್ತಿದ್ದ ಬೆಳಗಾವಿಯ ಉದ್ಯಮಿ, ಶಿವಂ ಅಸೋಸಿಯೇಟ್ಸ್ (Shivam Associates) ಮಾಲೀಕ ಶಿವಾನಂದ ನೀಲಣ್ಣನವರ್ ಅವರಿಗೆ ಜಿಲ್ಲಾಡಳಿತ ಬಿಗ್ ಶಾಕ್ ನೀಡಿದೆ. ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹೂಡಿಕೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರ ಕಚೇರಿ ಮೇಲೆ ಭರ್ಜರಿ ದಾಳಿ ನಡೆಸಲಾಗಿದ್ದು ಹಲವಾರು ಮಹತ್ವದ ದಾಖಲೆಗಳು ಲಭಿಸಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

45 ಸಾವಿರ ಜನರಿಗೆ ನಾಮ! ಲೆಕ್ಕ ಹಾಕಲಾಗದೆ ಅಧಿಕಾರಿಗಳು ಸುಸ್ತು!
ದಾಖಲೆಗಳನ್ನು ಜಾಲಾಡಿದ ಅಧಿಕಾರಿಗಳಿಗೆ ಕಣ್ಣು ಕತ್ತಲೆ ಬರುವಂತಹ ಸತ್ಯಗಳು ಗೋಚರಿಸಿವೆ.ಪ್ರಾಥಮಿಕ ತನಿಖೆಯ ಪ್ರಕಾರ ಬರೋಬ್ಬರಿ 45,000ಕ್ಕೂ ಹೆಚ್ಚು ಜನ ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅಂದಾಜು ₹4,500 ಕೋಟಿ ರೂಪಾಯಿ ಸಾರ್ವಜನಿಕರ ಹಣ ವಂಚನೆಯಾಗಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಹಣದ ಆಳ-ಅಗಲ ಎಷ್ಟಿದೆ ಎಂದರೆ, ಅದರ ಲೆಕ್ಕಾಚಾರ ಸಿಗದೆ ಅಧಿಕಾರಿಗಳು ಪರದಾಡುವಂತಾಗಿದೆ.ಸಿಕ್ಕ ದಾಖಲೆಗಳು: ದಾಳಿಯ ವೇಳೆ ಕಚೇರಿಯಲ್ಲಿ ಸುಮಾರು ₹400 ಕೋಟಿ ಮೌಲ್ಯದ ಬಾಂಡ್ ಪೇಪರ್‌ಗಳು ಪತ್ತೆಯಾಗಿವೆ.

ಕಾಣದಂತೆ ಮಾಯವಾದ ಹಣ!
ಬಂಧಿತ ಆರೋಪಿ ಸಾರ್ವಜನಿಕರಿಂದ ಸಂಗ್ರಹಿಸಿದ ಈ ಬೃಹತ್ ಮೊತ್ತವನ್ನು ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್ ಹಾಗೂ ಐಷಾರಾಮಿ ರೆಸಾರ್ಟ್‌ಗಳಲ್ಲಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ. ವಿಶೇಷವೆಂದರೆ ಈ ಎಲ್ಲಾ ಕೋಟ್ಯಂತರ ರೂಪಾಯಿ ಹಣದ ವರ್ಗಾವಣೆ ಆನ್‌ಲೈನ್ ಮೂಲಕವೇ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.ದೇಶ ಕಾಯುವ ಮಾಜಿ ಸೈನಿಕರು ಮತ್ತು ಮಧ್ಯಮ ವರ್ಗದ ಜನ ಸಾಮಾನ್ಯರ ಬೆವರಿನ ದುಡ್ಡನ್ನು ದುರುಪಯೋಗಪಡಿಸಿಕೊಂಡಿರುವ ಈ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ಇದೆ. ದೊಡ್ಡ ರಾಜಕಾರಣಿಯಾಗುವ ಕನಸು ಕಾಣುತ್ತಿದ್ದ ಶಿವಾನಂದ ನೀಲಣ್ಣನವರ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ. ಕ್ರಿಪ್ರ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ಹೂಡಿಕೆದಾರರಿಗೆ ನ್ಯಾಯ ಸಿಗುವವರೆಗೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವವರೆಗೆ ತನಿಖೆ ಮುಂದುವರಿಯಬೇಕಿದೆ.

#BelagaviScam #ShivanandaNeelannavar #ShivamAssociates #FinancialFraud #BelagaviNews #MohammedRoshanIAS #InvestmentScam #4500CroreScam #FreedomTVDigital #BreakingNewsKarnataka #ExServicemenFraud

Comments (0)

Your email address will not be published. Required fields are marked *

Back to top button