ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನ್ಯಾಯಾಲಯಗಳ ಮುಂದೆ ಪ್ರತಿದಿನ ಸಾವಿರಾರು ದಂಪತಿಗಳು ದೂರಾಗಲು ಅರ್ಜಿ ಸಲ್ಲಿಸುತ್ತಿದ್ದಾರೆ. ಹಿಂದೆ ಜಗತ್ತಿನಲ್ಲೇ ಅತಿ ಕಡಿಮೆ ವಿಚ್ಛೇದನ ಪ್ರಮಾಣ ಹೊಂದಿದ್ದ ನಮ್ಮ ದೇಶದಲ್ಲಿ ಇಂದು ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವುದು ಅಂಕಿಅಂಶಗಳಿಂದ ಸಾಬೀತಾಗಿದೆ. ವಿಶೇಷವಾಗಿ ಸುಶಿಕ್ಷಿತ, ಉನ್ನತ ಉದ್ಯೋಗದಲ್ಲಿರುವ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಮಹಿಳೆಯರೇ ಹೆಚ್ಚಾಗಿ ವಿಚ್ಛೇದನಕ್ಕೆ ಮುಂದಾಗುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಆದರೆ ಈ ಕಾನೂನಾತ್ಮಕ ಪ್ರಕ್ರಿಯೆಯಲ್ಲಿ ದಂಪತಿಗಳು ಪರಸ್ಪರ ದೂರಾಗುವುದು ಸುಲಭ ಎನಿಸಿದರೂ, ಅದರ ಅತಿದೊಡ್ಡ ಮತ್ತು ಕಠಿಣ ಪರಿಣಾಮವನ್ನು ಅನುಭವಿಸುವವರು ಮಾತ್ರ ಮನೆಯಲ್ಲಿರುವ ಪುಟ್ಟ ಮಕ್ಕಳು.
ಪತಿ-ಪತ್ನಿಯ ನಡುವಿನ ಅಹಂ ಅಥವಾ ಭಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ಎಂತಹ ಭಾವನಾತ್ಮಕ ಪರಿಣಾಮ ಬೀರುತ್ತವೆ ಎಂಬುದಕ್ಕೆ ಹೃದಯವಿದ್ರಾವಕ ಘಟನೆಯೊಂದು ಸಾಕ್ಷಿಯಾಗಿದೆ. ವಿಚ್ಛೇದನದ ಅಂತಿಮ ಪ್ರಕ್ರಿಯೆಯ ನಂತರ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸುವ ಸಂದರ್ಭದಲ್ಲಿ, ಆ ಪುಟ್ಟ ಕಂದ ಅಪ್ಪನನ್ನು ಬಿಟ್ಟಿರಲಾರದೆ ಬಿಗಿಯಾಗಿ ತಬ್ಬಿ ಹಿಡಿದು ಗೋಳಾಡುತ್ತಿರುವುದು ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.
ತಾಯಿ ಬಲವಂತವಾಗಿ ಮಗುವನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದರೂ, ಆ ಮಗು ಮಾತ್ರ ತಂದೆಯ ಪ್ರೀತಿಯ ತೋಳಿನಿಂದ ಹೊರಬರಲು ಒಪ್ಪದೆ ಪಡುವ ಯಾತನೆ ವಿಚ್ಛೇದನದ ಕ್ರೂರ ಮುಖವನ್ನು ಅನಾವರಣಗೊಳಿಸಿದೆ. ಪೋಷಕರಿಗೆ ಈ ನಿರ್ಧಾರವು ಜೀವನದ ಹೊಸ ಆರಂಭದಂತೆ ಕಂಡರೂ, ಮಗುವಿಗೆ ಮಾತ್ರ ತನ್ನ ಇಡೀ ಪ್ರಪಂಚವೇ ಎರಡಾಗಿ ಒಡೆಯುವ ದುರಂತದಂತೆ ಭಾಸವಾಗುತ್ತದೆ.ಸಾಮಾನ್ಯವಾಗಿ ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳ ಕಸ್ಟಡಿಯನ್ನು ನ್ಯಾಯಾಲಯಗಳು ತಾಯಂದಿರಿಗೇ ನೀಡುತ್ತವೆ, ಏಕೆಂದರೆ ಮಕ್ಕಳ ಲಾಲನೆ-ಪಾಲನೆಗೆ ತಾಯಿಯ ಮಮತೆ ಅತಿ ಮುಖ್ಯ ಎಂಬುದು ಕಾನೂನಿನ ಆಶಯವಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ತಂದೆಯ ಪ್ರೀತಿಯಿಂದ ವಂಚಿತವಾಗುವ ಮಕ್ಕಳು ಮಾನಸಿಕವಾಗಿ ತೀವ್ರವಾಗಿ ಬಳಲುತ್ತಾರೆ.
ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ತಂದೆಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೂ, ಪ್ರತಿದಿನದ ಸಾಮೀಪ್ಯವಿಲ್ಲದೆ ಬೆಳೆಯುವ ಮಕ್ಕಳಲ್ಲಿ ಜೀವನಪರ್ಯಂತ ಒಂದು ರೀತಿಯ ಪ್ರೀತಿಯ ಹಸಿವು ಮತ್ತು ನೋವು ಉಳಿದುಬಿಡುತ್ತದೆ. ವಿಚ್ಛೇದನವು ಕೇವಲ ಇಬ್ಬರು ವ್ಯಕ್ತಿಗಳನ್ನು ಬೇರ್ಪಡಿಸುವುದಿಲ್ಲ, ಬದಲಾಗಿ ಒಂದು ಸುಂದರ ಕುಟುಂಬ ವ್ಯವಸ್ಥೆಯನ್ನೇ ಧ್ವಂಸಗೊಳಿಸಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ ಎಂಬುದು ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.


