ಧಾರವಾಡ : ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ಧಾರವಾಡದ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಉದ್ಘಾಟಿಸಿದರು.ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ.
ದೇಶದ ವಿವಿಧ ಕಡೆಗಳಲ್ಲಿ ನವೀಕರಣಗೊಂಡ ಒಟ್ಟು 103 ರೈಲು ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಇಂದು ಉದ್ಘಾಟಿಸಿದ್ದು, ಅದರಲ್ಲಿ ಧಾರವಾಡದ ರೈಲು ನಿಲ್ದಾಣ ಕೂಡ ಉದ್ಘಾಟನೆಯಾಗಿದೆ.ಒಟ್ಟು 17.1 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡದ ರೈಲು ನಿಲ್ದಾಣವನ್ನು ನವೀಕರಣ ಮಾಡಲಾಗಿದೆ. ಎರಡನೇ ಪ್ರವೇಶ ದ್ವಾರ ಸೇರಿ ಪ್ರವೇಶಕ್ಕಾಗಿ 3 ಲಿಫ್ಟ್ಗಳನ್ನು ಅಳವಡಿಕೆ ಮಾಡಲಾಗಿದೆ.
ಹೊಸ ಮೇಲ್ಛಾವಣಿ ಮತ್ತು ನೆಲಹಾಸಿನ ಫ್ಲಾಟ್ ಫಾರ್ಮ್ ಉನ್ನತೀಕರಣ, ಪ್ರಯಾಣಿಕರ ಅನುಕೂಲಕ್ಕಾಗಿ ಕೆಫೆಟೇರಿಯಾ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಧಾರವಾಡದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಅಮೃತ ದೇಸಾಯಿ, ಮೇಯರ್ ರಾಮಣ್ಣ ಬಡಿಗೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.