ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ರೋಡ್ ರೇಜ್ ಪ್ರಕರಣಗಳಿಗೆ ಸಾಕ್ಷಿಯೆಂಬಂತೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಸುಮಾರು ದೂರದವರೆಗೆ ಎಳೆದೊಯ್ಯಲಾಗಿದೆ.
ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟವಾಗಿದ್ದರೂ ಯಾವುದನ್ನೂ ಲೆಕ್ಕಿಸದ ಚಾಲಕ, ಬಾನೆಟ್ ಮೇಲಿದ್ದ ವ್ಯಕ್ತಿ “ನಿಲ್ಲಿಸು, ನಿಲ್ಲಿಸು” ಎಂದು ಕೂಗಿಕೊಂಡರೂ ಕಾರನ್ನು ನಿಲ್ಲಿಸದೆ ಅತಿ ವೇಗವಾಗಿ ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾನೆ.ಈ ಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾನೆಟ್ ಮೇಲಿದ್ದ ವ್ಯಕ್ತಿ ಸ್ವಲ್ಪವೇ ನಿಯಂತ್ರಣ ತಪ್ಪಿದ್ದರೂ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಇತರೆ ವಾಹನ ಸವಾರರು ಇದನ್ನು ಕಂಡು ಬೆಚ್ಚಿಬಿದ್ದಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಸಾಮಾನ್ಯ ಜನರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಈ ಘಟನೆಗೆ ಮೂಲ ಕಾರಣ ಒಂದು ಸಣ್ಣ ಅಪಘಾತ. ಆರೋಪಿ ಚಾಲಕ ತನ್ನ ಕಾರನ್ನು ಆಟೋ ರಿಕ್ಷಾವೊಂದಕ್ಕೆ ತಗುಲಿಸಿದ್ದು, ಈ ವಿಚಾರವಾಗಿ ಆಟೋ ಚಾಲಕ ಮತ್ತು ಕಾರು ಚಾಲಕನ ನಡುವೆ ವಾಗ್ವಾದ ನಡೆದಿದೆ. ಜಗಳ ಜೋರಾದಾಗ ವ್ಯಕ್ತಿ ಕಾರನ್ನು ತಡೆಯಲು ಮುಂಭಾಗದಲ್ಲಿ ನಿಂತಿದ್ದಾರೆ. ಆದರೆ ಚಾಲಕ ಕಾರನ್ನು ಚಲಾಯಿಸಿದ್ದರಿಂದ ವ್ಯಕ್ತಿ ಬಾನೆಟ್ ಮೇಲೆ ಬೀಳುವಂತಾಗಿದೆ. ಆದರೂ ಚಾಲಕ ಕಾರು ನಿಲ್ಲಿಸದೆ ದರ್ಪ ಮೆರೆದಿದ್ದಾನೆ.
ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಈಗಾಗಲೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಬಳಸಿದ ಮಾರುತಿ ಸುಜುಕಿ XL6 ಕಾರನ್ನು ಜಪ್ತಿ ಮಾಡಲಾಗಿದೆ. ಸದ್ಯ ಚಾಲಕನ ವಿರುದ್ಧ ಕಾನೂನು ಕ್ರಮ ಜಾರಿಯಲ್ಲಿದ್ದು, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.


