ಕೇಂದ್ರ ಸಚಿವ ಅಮಿತ್ ಶಾ ಅವರ ಆಪ್ತನೆಂದು ಹೇಳಿಕೊಂಡು ಕೋಟಿಗಟ್ಟಲೆ ವಂಚಿಸುತ್ತಿದ್ದ ಸುಜಯೇಂದ್ರ ಎಂಬ ಖತರ್ನಾಕ್ ವಂಚಕನ ಹಗರಣಗಳು ಜೈಲಿನಿಂದ ಹೊರಬಂದ ಬೆನ್ನಲ್ಲೇ ಮತ್ತೆ ಬಯಲಿಗೆ ಬಂದಿವೆ. ರಾಜ್ಯಪಾಲರ ನಕಲಿ ಸಹಿ ಹಾಗೂ ರಾಜಭವನದ ಲೆಟರ್ಹೆಡ್ ಬಳಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಶಿಫಾರಸು ಪತ್ರ ಬರೆದಿದ್ದಕ್ಕಾಗಿ ಈತನ ವಿರುದ್ಧ ಈಗ ವಿಧಾನಸೌಧ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ವೈದ್ಯರೊಬ್ಬರಿಗೆ 2.5 ಕೋಟಿ ರೂ. ವಂಚಿಸಿ ಜೈಲು ಸೇರಿದ್ದ ಈತ, ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಹಳೆಯ ವಂಚನೆಯ ಜಾಲಗಳು ಒಂದೊಂದಾಗಿ ಹೊರಬರುತ್ತಿವೆ.ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸುಜಯೇಂದ್ರನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ನಕಲಿ ಸೀಲುಗಳು ಹಾಗೂ ಲೆಟರ್ಹೆಡ್ಗಳು ಪತ್ತೆಯಾಗಿರುವುದು ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಕೇವಲ ವಿಟಿಯು ಮಾತ್ರವಲ್ಲದೆ, ರಾಜ್ಯದ ಹಲವು ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಈತ ಪೋಷಕರಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಸಂಶಯವಿದ್ದು, ಪ್ರಕರಣದ ವ್ಯಾಪ್ತಿ ದೊಡ್ಡ ಮಟ್ಟದಲ್ಲಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ವಂಚನೆಯ ಜಾಲದಲ್ಲಿ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳ ಕೈವಾಡವಿದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ. ನಕಲಿ ಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ ಸೀಟು ಮಂಜೂರು ಮಾಡಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ಪ್ರಕರಣವನ್ನು ವಿಜಯನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಬಿ.ಎನ್.ಎಸ್ ಕಾಯ್ದೆಯಡಿ ಕಠಿಣ ಸೆಕ್ಷನ್ಗಳನ್ನು ಹೇರಲಾಗಿದೆ. ಅಧಿಕಾರಶಾಹಿ ಮತ್ತು ರಾಜಕೀಯ ಪ್ರಭಾವದ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಸುಜಯೇಂದ್ರನ ಸುತ್ತ ಈಗ ಕಾನೂನಿನ ಉರುಳು ಬಿಗಿಯಾಗುತ್ತಿದೆ.


