ಮಂಡ್ಯ: ಶಾಸಕ ಗಣಿಗ ರವಿಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. “ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರಿಗಿಂತ ದೊಡ್ಡವರು ಯಾರೂ ಇಲ್ಲ. ಅವರು ಏನು ಹೇಳಿದರೂ ನಾವು ಕೇಳಬೇಕು, ಆದರೆ ನಾವು ಅವರಿಗೆ ಏನೂ ಹೇಳಲು ಸಾಧ್ಯವಿಲ್ಲ. ಹೈಕಮಾಂಡ್ ನಮಗೆ ನೋಟಿಸ್ ನೀಡಬಹುದೇ ಹೊರತು, ನಾವು ಅವರಿಗೆ ನೋಟಿಸ್ ನೀಡಲು ಸಾಧ್ಯವಿಲ್ಲ” ಎಂದು ಯತೀಂದ್ರ ಅವರ ಇತ್ತೀಚಿನ ಹೇಳಿಕೆಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ ಗಣಿಗ ರವಿಕುಮಾರ್, ಡಿಕೆಶಿ ಅವರು ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಡಿಕೆಶಿ ಅವರಿಗೆ ರಾಜಕಾರಣ ಅರೆದು ಕುಡಿದ ವಿದ್ಯೆ. ಯಾವಾಗ ಯಾವ ದಾಳ ಉರುಳಿಸಬೇಕು ಎಂಬ ಚಾಣಾಕ್ಷತನ ಅವರಿಗಿದೆ. ನಮ್ಮ ತಂಡ ಐರ್ಲೆಂಡ್ ಟೀಮ್ ಅಲ್ಲ, ಅದು ಬಲಿಷ್ಠ ಭಾರತ ಕ್ರಿಕೆಟ್ ತಂಡದಂತೆ” ಎಂದು ಡಿಕೆಶಿ ಅವರ ರಾಜಕೀಯ ತಂತ್ರಗಾರಿಕೆಯನ್ನು ಕೊಂಡಾಡಿದರು.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೂ ಹರಿಹಾಯ್ದ ಅವರು, ಸರ್ಕಾರ ಉರುಳಿಸುವ ಹೆಚ್ಡಿಕೆ ಅವರ ಹೇಳಿಕೆಗೆ ಬೆಸ್ಟ್ ಆಫ್ ಲಕ್ ಎಂದರು. “ಸರ್ಕಾರ ಉರುಳಿಸುವುದರಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ. ಹಿಂದೆ 12 ತಿಂಗಳಲ್ಲೇ ತಮ್ಮದೇ ಸರ್ಕಾರ ಕಳೆದುಕೊಂಡ ಅವರಿಗೆ, ಈಗ ತಾವು ಆಡಳಿತ ಪಕ್ಷವೋ ಅಥವಾ ವಿರೋಧ ಪಕ್ಷವೋ ಎಂಬ ಗೊಂದಲವಿದೆ. ಎಆರ್ಎಐ ಘಟಕಕ್ಕೆ ಜಾಗ ಕೊಟ್ಟಿದ್ದೇವೆ, ಇನ್ನು ಎಷ್ಟು ಪಿಕ್ಚರ್ ತೋರಿಸುತ್ತಾರೆ ನೋಡೋಣ” ಎಂದು ಸವಾಲು ಹಾಕಿದರು.


