ವಿಜಯಪುರ: ದೇವರಹಿಪ್ಪರಗಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ನಾಪತ್ತೆ ನಾಟಕವಾಡಿದ್ದ ಭಯಾನಕ ಪ್ರಕರಣವೊಂದು 24 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಸಾಲದ ವಿಚಾರವಾಗಿ ದಂಪತಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಆರೋಪಿ ಪತಿ ಪ್ರಭು ರತ್ನಾಕರ್ ತನ್ನ ಪತ್ನಿ ಸರೋಜಿನಿ (45) ಅವರ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ, ಏನೂ ತಿಳಿಯದವನಂತೆ ಪೊಲೀಸರಿಗೆ ದೂರು ನೀಡಿದ್ದ.
ಪತ್ನಿ ಕಿರಾಣಿ ಸಾಮಗ್ರಿ ತರಲು ಹೋಗಿ ನಾಪತ್ತೆಯಾಗಿದ್ದಾಳೆ ಎಂದು ನಂಬಿಸಲು ಯತ್ನಿಸಿದ್ದ ಆರೋಪಿ, ಮಗನೊಂದಿಗೆ ಸೇರಿ ಪಟ್ಟಣದಾದ್ಯಂತ ಹುಡುಕಾಟ ನಡೆಸುವ ನಾಟಕವಾಡಿದ್ದ. ಸಂಬಂಧಿಕರಿಗೂ ಫೋನ್ ಮಾಡಿ ಪತ್ನಿಯ ಬಗ್ಗೆ ವಿಚಾರಿಸಿ ತಾನು ಅಮಾಯಕ ಎಂದು ಬಿಂಬಿಸಿಕೊಂಡಿದ್ದ. ಆದರೆ, ಪ್ರಕರಣದ ತನಿಖೆ ಕೈಗೆತ್ತಿಕೊಂಡ ದೇವರಹಿಪ್ಪರಗಿ ಪೊಲೀಸರು ಆರೋಪಿಯ ವರ್ತನೆಯ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಈ ಕ್ರೂರ ಹತ್ಯೆಯ ಸತ್ಯಾಂಶ ಬಯಲಾಗಿದೆ.
ಪತ್ನಿಯ ಹೆಸರಿನಲ್ಲಿ ಮಾಡಿದ್ದ ಸಾಲವೇ ಈ ಕೊಲೆಗೆ ಮೂಲ ಕಾರಣ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಪೊಲೀಸರು ತಹಶೀಲ್ದಾರ್ ಸಮಕ್ಷಮದಲ್ಲಿ ಹೂತುಹಾಕಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತ ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


