ಬೆಂಗಳೂರು: ಅತಿಯಾದ ಜಾಹೀರಾತಿನಿಂದಾಗಿ ಗ್ರಾಹಕರ ಸಮಯ ವ್ಯರ್ಥ ಮಾಡಿದ್ದಲ್ಲದೆ, ಮಾನಸಿಕ ತೊಂದರೆ ನೀಡಿದ್ದಾರೆಂದು ಪಿವಿಆರ್ ಸಿನಿಮಾ ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಒಂದು ಲಕ್ಷ ರೂ.ಗಳ ದಂಡ ವಿಧಿಸಿದೆ.
ಅಷ್ಟೇ ಅಲ್ಲದೆ, ಅತಿಯಾದ ಜಾಹೀರಾತು ಪ್ರದರ್ಶನದಿಂದ ದೂರುದಾರರಿಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ತೊಂದರೆಗಾಗಿ 20,000 ರೂ. ದಂಡ, ಪ್ರಕರಣದ ಕಾನೂನು ಹೋರಾಟದ ವೆಚ್ಚ ಭರಿಸಲು 8,000 ರೂ. ನೀಡುವಂತೆ ಆದೇಶಿಸಿದೆ. ಈ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸಲು ನ್ಯಾಯಾಲಯ ಸೂಚಿಸಿದೆ.
ನಗರದ ಮಲ್ಲೇಶ್ವರದ ಅಭಿಷೇಕ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ, ಸದಸ್ಯರಾದ ಕೆ.ಅನಿತಾ ಶಿವಕುಮಾರ್ ಮತ್ತು ಸುಮಾ ಅನಿಲ್ ಕುಮಾರ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಗ್ರಾಹಕರ ಸಮಯ ಮತ್ತು ಹಣದಿಂದ ಅನ್ಯಾಯದ ರೀತಿಯಲ್ಲಿ ಲಾಭ ಪಡೆಯುವ ಹಕ್ಕನ್ನು ಯಾವುದೇ ವ್ಯವಹಾರ ಹೊಂದಿಲ್ಲ. ಪ್ರಮುಖವಾಗಿ ಸಮಯಕ್ಕೆ ಅತ್ಯಂತ ಮಹತ್ವವಿದೆ. ಅಲ್ಲದೆ, ಜನರು ವಿಶ್ರಾಂತಿಗಾಗಿ ಮನರಂಜನೆಯನ್ನು ಬಯಸುತ್ತಾರೆ. ಹೀಗಿದ್ದಾಗ ಜನರು 25 ರಿಂದ 30 ನಿಮಿಷಗಳನ್ನು ಕಳೆಯುವುದು ಒತ್ತಡದ ವ್ಯಕ್ತಿಗಳಿಗೆ ಸಮಯ ವ್ಯರ್ಥ ಮಾತ್ರವಲ್ಲ, ಮಾನಸಿಕವಾಗಿಯೂ ಹಿಂಸೆಗೊಳಗಾಗುತ್ತಾರೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ಜೊತೆಗೆ ಯಾವುದೇ ಚಲನಚಿತ್ರಗಳು ಪ್ರಾರಂಭವಾಗುವ ನಿಖರ ಸಮಯ ಎಷ್ಟೆಂದು ವೀಕ್ಷಕರಿಗೆ ಸ್ಪಷ್ಟವಾಗಿ ತಿಳಿಸಬೇಕೆಂದು ಸೂಚನೆ ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಪಿಚಿಆರ್ ಸಿನಿಮಾ ಪ್ರದರ್ಶನಕ್ಕೂ ಮುನ್ನ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಪ್ರದರ್ಶನ ಮಾಡಬೇಕು. ಸರ್ಕಾರ ಈ ರೀತಿಯ ಪ್ರಕಟಣೆಗಳಿಗೆ ಗರಿಷ್ಠ 10 ನಿಮಿಷಗಳ ಸಮಯಾವಕಾಶ ಮಾತ್ರ ಇದೆ ಎಂದು ಪೀಠ ಹೇಳಿದೆ.