Sunday, February 15, 2026
29.6 C
Bengaluru
Google search engine
LIVE
ಮನೆ#Exclusive NewsTop Newsಹಬ್ಬ ಮುಗಿಸಿ ಊರಿಗೆ ಮರಳುವವರಿಗೆ ರೈಲ್ವೆ ಶಾಕ್;ನಾಳೆ ಹಲವು ರೈಲುಗಳು ರದ್ದು

ಹಬ್ಬ ಮುಗಿಸಿ ಊರಿಗೆ ಮರಳುವವರಿಗೆ ರೈಲ್ವೆ ಶಾಕ್;ನಾಳೆ ಹಲವು ರೈಲುಗಳು ರದ್ದು

ಫೆಬ್ರವರಿ 16ರ ಸೋಮವಾರ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಹಬ್ಬದ ರಜೆ ಮುಗಿಸಿ ಬೆಂಗಳೂರು ಹಾಗೂ ಇತರೆಡೆಗೆ ಕೆಲಸಕ್ಕೆ ಮರಳಲು ಸಜ್ಜಾಗಿದ್ದ ಪ್ರಯಾಣಿಕರಿಗೆ ಈ ಬದಲಾವಣೆಗಳು ದೊಡ್ಡ ಮಟ್ಟದ ಅಡಚಣೆ ತಂದೊಡ್ಡಲಿವೆ. ಮುಖ್ಯವಾಗಿ ಅರಸೀಕೆರೆ ಮತ್ತು ಹಬ್ಬನಘಟ್ಟ ನಿಲ್ದಾಣಗಳ ನಡುವಿನ ಕೆಲಸದಿಂದಾಗಿ ಹಲವು ರೈಲುಗಳ ಸೇವೆಯನ್ನು ರೈಲ್ವೆ ಇಲಾಖೆಯು ರದ್ದುಗೊಳಿಸಿದೆ.

ಕಾಮಗಾರಿಯ ಹಿನ್ನೆಲೆ ಅರಸೀಕೆರೆ–ಮೈಸೂರು ಪ್ಯಾಸೆಂಜರ್, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಹಾಗೂ ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲುಗಳನ್ನು ಫೆಬ್ರವರಿ 16ರಂದು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಅಲ್ಲದೆ ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಮೈಸೂರಿನ ಬದಲು ಅರಸೀಕೆರೆಯಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ. ಇದರಿಂದಾಗಿ ಮೈಸೂರು ಭಾಗದ ಪ್ರಯಾಣಿಕರು ಈ ರೈಲುಗಳ ಸೇವೆಯಿಂದ ವಂಚಿತರಾಗಲಿದ್ದಾರೆ.

ರದ್ದಾಗಿರುವ ರೈಲುಗಳಲ್ಲದೆ ಇನ್ನು ಕೆಲವು ರೈಲುಗಳ ಸಂಚಾರದಲ್ಲಿ ವಿಳಂಬವೂ ಉಂಟಾಗಲಿದೆ. ಮೈಸೂರು–ಅರಸೀಕೆರೆ ಪ್ಯಾಸೆಂಜರ್ ಹಾಗೂ ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯೆ ಸುಮಾರು 100 ರಿಂದ 110 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಗಾಗಲಿವೆ. ಅದೇ ರೀತಿ ಅರಸೀಕೆರೆ–ಮೈಸೂರು ಮತ್ತು ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲುಗಳು ಕೂಡ ನಿಗದಿತ ಸಮಯಕ್ಕಿಂತ ಸುಮಾರು 100 ನಿಮಿಷ ತಡವಾಗಿ ಸಂಚರಿಸಲಿವೆ ಎಂದು ಇಲಾಖೆ ತಿಳಿಸಿದೆ.

ಸೋಮವಾರ ಬೆಳಗ್ಗೆ ಕಚೇರಿಗೆ ಅಥವಾ ಶಾಲಾ-ಕಾಲೇಜುಗಳಿಗೆ ತೆರಳುವವರು ರೈಲುಗಳ ಈ ಬದಲಾದ ವೇಳಾಪಟ್ಟಿಯನ್ನು ಗಮನಿಸಿ ಮುಂಚಿತವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ತುರ್ತು ಪ್ರಯಾಣವಿದ್ದಲ್ಲಿ ಬಸ್ ಅಥವಾ ಖಾಸಗಿ ವಾಹನಗಳ ಮೊರೆ ಹೋಗಲು ರೈಲ್ವೆ ಇಲಾಖೆ ಪ್ರಯಾಣಿಕರಲ್ಲಿ ವಿನಂತಿಸಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ರೈಲುಗಳ ಸಂಚಾರವು ಎಂದಿನಂತೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments