ಸಣ್ಣ ಜಗಳಕ್ಕೆ ಪ್ರೇಯಸಿ ಆತ್ಮಹತ್ಯೆ; ವಿರಹ ತಾಳಲಾರದೆ ಪ್ರಿಯಕರನೂ ಬಲಿ..!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. 19 ವರ್ಷದ ಪವಿತ್ರಾ ಒಂಟಿ ಮತ್ತು ಕಾರ್ತಿಕ್ ನಾಯಕ್ ಸಾವನ್ನಪ್ಪಿದ ಪ್ರೇಮಿಗಳಾಗಿದ್ದು, ಇವರಿಬ್ಬರ ನಡುವೆ ಮಂಗಳವಾರ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಈ ವೈಮನಸ್ಸಿನಿಂದ ಮನನೊಂದ ಬನಹಟ್ಟಿಯ ಕೆಹೆಚ್ಡಿಸಿ ಕಾಲೋನಿ ನಿವಾಸಿ ಪವಿತ್ರಾ ಮೊದಲು ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ತಾನು ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಅತ್ತ ಅಸ್ಕಿ ಗ್ರಾಮದಲ್ಲಿದ್ದ ಪ್ರಿಯಕರ ಕಾರ್ತಿಕ್ ಕೂಡ ತೀವ್ರ ಆಘಾತಕ್ಕೊಳಗಾಗಿದ್ದಾನೆ. ಪ್ರೇಯಸಿಯ ಅಗಲಿಕೆಯನ್ನು ಸಹಿಸಲಾರದೆ ಆತ ಕೂಡ ನೇಣು ಹಾಕಿಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾನೆ. ವಿಷಯ ತಿಳಿದ ತಕ್ಷಣ ಬನಹಟ್ಟಿ ಪೊಲೀಸರು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇವಲ ಒಂದು ಸಣ್ಣ ಜಗಳಕ್ಕೆ ಎರಡು ಜೀವಗಳು ಬಲಿಯಾಗಿರುವುದು ಎರಡೂ ಕುಟುಂಬಗಳಲ್ಲಿ ತುಂಬಲಾರದ ನೋವು ತಂದಿದೆ.




