ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕವಾಗಿ ಶೋಕಾಚರಣೆ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಅಲೀಪುರದಲ್ಲಿ ಮೂರು ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ಘೋಷಿಸಲಾಗಿದೆ. ಹಲವು ಮುಸ್ಲಿಂ ರಾಷ್ಟ್ರಗಳು ಈ ಘಟನೆಗೆ ಸಂತಾಪ ಸೂಚಿಸಿವೆ. ಆದರೆ, ಇರಾನ್ ನಾಯಕನ ಸಾವಿಗೆ ಇಲ್ಲಿ ಶೋಕಾಚರಣೆ ಮಾಡುತ್ತಿರುವುದನ್ನು ಕಂಡು ಸ್ಯಾಂಡಲ್ವುಡ್ ನಟ ಪ್ರಥಮ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕಿಡಿಕಾರಿದ್ದಾರೆ. ತಮ್ಮ ಪೋಸ್ಟ್ ಮೂಲಕ ನೇರ ಪ್ರಶ್ನೆಗಳನ್ನು ಎಸೆದಿರುವ ಅವರು, ಈ ರೀತಿಯ ದ್ವಂದ್ವ ನಿಲುವಿನಿಂದ ದೇಶ ಉದ್ಧಾರ ಆಗುವುದು ಕಷ್ಟ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಟ ಪ್ರಥಮ್ ತಮ್ಮ ಪೋಸ್ಟ್ನಲ್ಲಿ ದೇಶಭಕ್ತಿಯನ್ನು ಮುನ್ನೆಲೆಗೆ ತಂದಿದ್ದು, ಪೆಹಲ್ಗಾಮ್ನಲ್ಲಿ ನಮ್ಮ ದೇಶದ ಯೋಧರು ವೀರಮರಣ ಅಪ್ಪಿದಾಗ ನಿಮ್ಮ ಈ ಕಪ್ಪು ಬಟ್ಟೆ ಎಲ್ಲಿ ಹೋಗಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಂದು ಪಾಕಿಸ್ತಾನದ ವಿರುದ್ಧ ಇಂತಹ ಘೋಷಣೆಗಳು ಏಕೆ ಬರಲಿಲ್ಲ ಮತ್ತು ನಮ್ಮ ಸೈನಿಕರು ಸತ್ತಾಗ ಈ ಮಟ್ಟದ ಕಾಳಜಿ ನಿಮ್ಮಲ್ಲಿ ಏಕೆ ಮೂಡುವುದಿಲ್ಲ ಎಂದು ಅವರು ಕೇಳಿದ್ದಾರೆ. ಪರದೇಶದ ನಾಯಕ ಸತ್ತಾಗ ಮಿಡಿಯುವ ನಿಮ್ಮ ಮನಸ್ಸು, ನಮ್ಮ ನೆಲದ ರಕ್ಷಣೆಗಾಗಿ ಪ್ರಾಣ ಕೊಟ್ಟ ಯೋಧರಿಗಾಗಿ ಏಕೆ ಮಿಡಿಯುವುದಿಲ್ಲ ಎಂಬುದು ಅವರ ಪ್ರಮುಖ ವಾದವಾಗಿದೆ.
ಮುಂದುವರಿದು ಮಾತನಾಡಿದ ಅವರು, ತಾನು ಖಮೇನಿ ಅವರ ಸಾವನ್ನು ಸಂಭ್ರಮಿಸುತ್ತಿಲ್ಲ, ಆದರೆ ಕೇವಲ ನಮ್ಮ ಯೋಧರ ಬಗ್ಗೆ ಇರುವ ಕಾಳಜಿಯಿಂದ ಈ ಪೋಸ್ಟ್ ಹಾಕುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ವಿರುದ್ಧ ಧಿಕ್ಕಾರ ಕೂಗುವ ಪ್ರತಿಭಟನಾಕಾರರು, ನಮ್ಮ ಯೋಧರು ಹುತಾತ್ಮರಾದಾಗ ಪಾಕಿಸ್ತಾನದ ವಿರುದ್ಧ ಎಂದಾದರೂ ಸ್ಟ್ರೈಕ್ ಮಾಡಿದ್ದೀರಾ ಅಥವಾ ಅಂದು ನಿಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಯಾರಿಗೂ ಬುದ್ಧಿ ಹೇಳಿ ಪ್ರಯೋಜನವಿಲ್ಲ, ಮೊದಲು ನಾವು ಸರಿಹೋಗಬೇಕು ಎಂದು ಹೇಳುವ ಮೂಲಕ ಪ್ರಥಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದಾರೆ.


