ರಾಜಕೀಯರಾಜ್ಯಸುದ್ದಿ

ವಿದೇಶಿ ಪ್ರವಾಸ ಮುಗಿಸಿ ಸಿಲಿಕಾನ್ ಸಿಟಿಗೆ ಮರಳಿದ ಕೈ ಶಾಸಕರು!

ವಿದೇಶಿ ಪ್ರವಾಸ ಮುಗಿಸಿದ ರಾಜ್ಯ ಕಾಂಗ್ರೆಸ್ ಶಾಸಕರ ತಂಡವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆಗುವ ಮೂಲಕ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಆಡಳಿತಾರೂಢ ಪಕ್ಷದೊಳಗೆ ಆಂತರಿಕ ಸಂಘರ್ಷಗಳು ಮತ್ತು ಚರ್ಚೆಗಳು ನಡೆಯುತ್ತಿರುವಾಗಲೇ ಈ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು ಸಾಕಷ್ಟು ರಾಜಕೀಯ ವಿಶ್ಲೇಷಣೆಗಳಿಗೆ ಕಾರಣವಾಗಿತ್ತು. ಎಚ್.ಡಿ. ತಮ್ಮಯ್ಯ, ದೇವೇಂದ್ರಪ್ಪ ಮತ್ತು ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಪ್ರಮುಖ ಶಾಸಕರು ಈ ವಿದೇಶಿ ಪ್ರವಾಸ ಮುಗಿಸಿ ನಾಡಿಗೆ ಮರಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ್ , ಇದೊಂದು ಕೇವಲ ಕೌಟುಂಬಿಕ ಪ್ರವಾಸವಾಗಿತ್ತೇ ಹೊರತು ಯಾವುದೇ ರಾಜಕೀಯ ಉದ್ದೇಶ ಇದರಲ್ಲಿರಲಿಲ್ಲ . ಪ್ರವಾಸದ ಅವಧಿಯಲ್ಲಿ ಯಾವುದೇ ರಾಜಕೀಯ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ ಹಾಗೂ ಯಾವುದೇ ಅಧ್ಯಯನ ಪ್ರವಾಸಕ್ಕೆ ತಾವು ತೆರಳಿರಲಿಲ್ಲ ಎಂದು ಹೇಳಿದ್ದಾರೆ. ವಿದೇಶಿ ಮಣ್ಣಿನಲ್ಲಿ ಕುಳಿತು ರಾಜಕೀಯ ಚರ್ಚೆ ಮಾಡುವ ಅಗತ್ಯ ನಮಗಿಲ್ಲ ಎಂದು ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ ಜಗಳೂರು ಶಾಸಕ ದೇವೇಂದ್ರಪ್ಪ ನಾಗರಾಜ್ ಅವರಿಗಿಂತ ಭಿನ್ನವಾದ ಹೇಳಿಕೆ ನೀಡಿದ್ದು, ಪ್ರವಾಸದ ಜೊತೆಗೆ ಸ್ವಲ್ಪ ಮಟ್ಟಿನ ಅಧ್ಯಯನವನ್ನೂ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾದಂತಹ ದೇಶಕ್ಕೆ ತೆರಳಿ ಅಲ್ಲಿ ಯಾವ ರೀತಿ ರಾಜಕೀಯ ಮಾಡಲು ಸಾಧ್ಯ , ಪ್ರವಾಸಕ್ಕೂ ಮತ್ತು ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ , ನಮ್ಮ ನಾಯಕರ ನಡುವೆ ಯಾವುದೇ ಗೊಂದಲಗಳಿಲ್ಲ ಹಾಗೂ ಒಂದು ವೇಳೆ ರಾಜಕೀಯ ಉದ್ದೇಶಕ್ಕಾಗಿ ಹೋಗಿದ್ದರೆ ಮಾಧ್ಯಮಗಳ ಕಣ್ಣಿಗೆ ಬೀಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button